ಮೈಸೂರು ಮಲ್ಲಿಗೆ ಪರಿಮಳ ಉಳಿಸಲು ಪೇಟೆಂಟ್ ಅಸ್ತ್ರ
ಬೆಂಗಳೂರು, ಜ.03: ಕರ್ನಾಟಕದ ಹೆಮ್ಮೆಯ ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ ಹಾಗೂ ಹಡಗಲಿ ಮಲ್ಲಿಗೆ ಹೂವಿನ ತಳಿಗಳನ್ನು ಸಂರಕ್ಷಿಸಲು ರಾಜ್ಯದ ರೈತರಿಗೆ ಪೇಟೆಂಟ್ ದೊರೆತಿದೆ.
ಜಿಯೊಗ್ರಾಫಿಕಲ್ ಇಂಡಿಕೇಷನ್ (GI) ಮಾನ್ಯತೆ ದೊರೆತಿರುವುದರಿಂದ ಈ ಮೂರು ತಳಿಗಳನ್ನು ಬೆಳೆಯಲು ಹಾಗೂ ವ್ಯಾಪಾರ ವಹಿವಾಟು ನಡೆಸಲು ರೈತರಿಗೆ ಅನುಕೂಲವಾಗಲಿದೆ. ಇದಲ್ಲದೆ ಮೈಸೂರು ವಿಳೆಯದೆಲೆ, ನಂಜನಗೂಡು ಬಾಳೆಗೂ ಕೂಡ ಭೌತಿಕ ಹಕ್ಕು ಸ್ವಾಮ್ಯ (ಐ ಪಿಆರ್) ಅಡಿಯಲ್ಲಿ ನೋಂದಣಿಯಾಗಿರುವುದು ಸಂತಸದ ವಿಚಾರ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಕೆ.ರಾಮಕೃಷ್ಣಪ್ಪ ಹೇಳಿದರು.
ಸಂರಕ್ಷಣೆಗೆ ವಿಚಾರ ಸಂಕಿರಣ ಅಗತ್ಯ:
ಈ ವರೆಗೆ ಐಪಿಆರ್ ಅಡಿಯಲ್ಲಿ ನೋಂದಣಿಯಾಗಿರುವ ಒಟ್ಟು 10 ತಳಿಗಳಲ್ಲಿ 6 ತಳಿಗಳು ಕರ್ನಾಟಕದ್ದು ಎನ್ನುವುದು ಹೆಮ್ಮೆಯ ವಿಷಯ. ಈ ತಳಿಗಳ ಜೊತೆಗೆ, ದೇವನಹಳ್ಳಿ ಚಕ್ಕೋತಾ, ಅಪ್ಪೆಮಿಡಿ ಮತ್ತು ಕಮಲಾಪುರ ಬಾಳೆ ಇವುಗಳನ್ನೂ ಐಪಿಆರ್ ಅಡಿಯಲ್ಲಿಮಾನ್ಯತೆಗಾಗಿ ಕೋರಿ ಅರ್ಜಿ ಸಲ್ಲಿಸಲಾಗುವುದು. ಈ ಅಪರೂಪದ ತಳಿಗಳನ್ನು ಸಂರಕ್ಷಿಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ತೋಟಗಾರಿಕಾ ಇಲಾಖೆ ರಾಜ್ಯದ ಹಲವು ಭಾಗಗಳಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ರಾಮಕೃಷ್ಣಪ್ಪ ವಿವರಿಸಿದರು.
ಮಲ್ಲಿಗೆ ಪರಿಮಳಕ್ಕೆ ಸಾಟಿಯಿಲ್ಲ:
ಸುಗಂಧಭರಿತ ಹೂವುಗಳು ಅನೇಕ ಇದ್ದರೂ, ಮಲ್ಲಿಗೆ ತನ್ನ ಪರಿಮಳದಿಂದ ಲೋಕಪ್ರಸಿದ್ಧಿಯನ್ನು ಪಡೆದಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆವ ಮಲ್ಲಿಗೆ, ಮೈಸೂರು ಮಲ್ಲಿಗೆ ಎಂದು ಖ್ಯಾತಿ ಗಳಿಸಿತು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಬೆಳೆವ ಮಲ್ಲಿಗೆ ತಳಿ, ವಾಸನೆ ಮಲ್ಲಿಗೆಯಾಗಿ ಪ್ರಸಿದ್ಧಿ ಗಳಿಸಿದೆ. ಕರಾವಳಿ ಪ್ರದೇಶದ ಉಡುಪಿ ಜಿಲ್ಲೆಯ ಶಂಕರಪುರದ ಮಲ್ಲಿಗೆಗೆ 100 ವರ್ಷದ ಇತಿಹಾಸವಿದ್ದು, ಕರಾವಳಿ ಸೇರಿದಂತೆ ಮುಂಬಯಿ ಪ್ರದೇಶದಲ್ಲಿ ಭಾರಿ ಬೇಡಿಕೆ ಹೊಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications