ನೋಡೋಣ ಬಾರಾ ಭಾನುವಾರದ ಜೋರಿನ ಜಂಬೂ ಸವಾರಿ!
ಮೈಸೂರು, ಅ.19 : ಅರಮನೆ ನಗರ ಮೈಸೂರಿನಲ್ಲಿ 9ದಿನಗಳ ನವರಾತ್ರಿ ಉತ್ಸವದ ಸಡಗರ. ಭಾನುವಾರ(ಅ.21) ನಡೆಯಲಿರುವ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಭರದ ಸಿದ್ಧತೆಗಳು ನಡೆದಿವೆ.
ವಿಶ್ವ ಪ್ರಸಿದ್ಧ ದಸರಾ ಮೆರವಣಿಗೆಯನ್ನು ಅಚ್ಚುಕಟ್ಟಿನಿಂದ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ರಾಷ್ಟ್ರಪತಿ ಆಡಳಿತವನ್ನು ಕಂಡಿದೆ. ಅರಮನೆ ಮುಂದೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಜಂಬೂ ಸವಾರಿಗೆ ಚಾಲನೆ ನೀಡುವರು. ಅಂಬಾರಿ ಮೇಲೆ ಕೂರುವ ಚಾಮುಂಡೇಶ್ವರಿ ವಿಗ್ರಹಕ್ಕೂ ಅವರು ಪೂಜೆ ಸಲ್ಲಿಸಲಿದ್ದಾರೆ.
ಸುಮಾರು 50ವರ್ಷದ ಆನೆ ಬಲರಾಮ ಅಂಬಾರಿ ಹೊರಲಿದ್ದಾನೆ. ರಾಜ ಮನೆತನದ ಶ್ರೀಕಂಠ ದತ್ತ ಒಡೆಯರ್ ಈ ಸಂದರ್ಭದಲ್ಲಿ ಹಾಜರಿರುತ್ತಾರೆ. ಪೊಲೀಸರು 21ಸುತ್ತಿನ ಕುಶಾಲು ತೋಪುಗಳನ್ನು ಹಾರಿಸಿ, ಗೌರವ ಸಲ್ಲಿಸಿದ ಮೇಲೆ ಮೆರವಣಿಗೆ ಆರಂಭಗೊಳ್ಳಲಿದೆ. ಬನ್ನಿಮಂಟಪಕ್ಕೆ ತೆರಳಿ, ಮತ್ತೆ ಅರಮನೆಗೆ ಮೆರವಣಿಗೆ ಮರಳಲಿದೆ. 80ಘಟಕಗಳಾಗಿ ಮೆರವಣಿಗೆ ಸಾಗಲಿದೆ.
ಕಳೆದ ಒಂದು ವಾರದಿಂದ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಕರಿಂದ ಮೈಸೂರು ತುಂಬಿತುಳುಕುತ್ತಿದೆ. 20ಲಕ್ಷಕ್ಕೂ ಅಧಿಕ ಮಂದಿ ದಸರಾದ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೋಟೆಲ್ ಗಳು ಮುಂದಿನ ಮೂರು ದಿನಗಳ ಕಾಲ ಭರ್ತಿಯಾಗಿವೆ. ರೈಲ್ವೆ ಇಲಾಖೆ ಮತ್ತು ಕೆಎಸ್ಆರ್ ಟಿಸಿ ವಿಶೇಷ ಸೇವೆಯನ್ನು ನೀಡುತ್ತಿದೆ. ಬನ್ನಿ ಮಂಟಪದಲ್ಲಿ ಶನಿವಾರ ಸಂಜೆ ಪಂಜಿನ ಕವಾಯತು ನಡೆಯಲಿದೆ.
(ಯುಎನ್ಐ)












Click it and Unblock the Notifications