ಹುಬ್ಬಳ್ಳಿಗೆ ಕಾಲಿಟ್ಟ ಕನ್ನಡಪ್ರಭ! ಗಂಗಾವತಿ ಕೈಬಿಟ್ಟ ವಿ.ಕ!?
ಕನ್ನಡಪ್ರಭ ಪತ್ರಿಕೆ ತನ್ನ 5ನೇ ಆವೃತ್ತಿಯನ್ನು ಹುಬ್ಬಳ್ಳಿಯಲ್ಲಿ ಶನಿವಾರ(ಜು.21)ದಿಂದ ಆರಂಭಿಸಲಿದೆ. ಲಭ್ಯವಿರುವ ಸುದ್ದಿಮೂಲಗಳ ಪ್ರಕಾರ ಆ.1ರಿಂದ ವಿಜಯಕರ್ನಾಟಕದ ಗಂಗಾವತಿ ಆವೃತ್ತಿಗೆ ಬೀಗ ಬೀಳಲಿದೆ. ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಸಾಗಿದೆ ಎನ್ನಲಾಗಿದೆ.
1967ರಲ್ಲಿ ಬೆಂಗಳೂರು, 1997ರಲ್ಲಿ ಬೆಳಗಾವಿ, 1999ರಲ್ಲಿ ಶಿವಮೊಗ್ಗ, 2001ರಲ್ಲಿ ಮಂಗಳೂರು ಆವೃತ್ತಿ ಆರಂಭಿಸಿದ್ದ ಕನ್ನಡಪ್ರಭ, ಹೊಸ ಆವೃತ್ತಿ ಮುಖಾಂತರ ಇನ್ನಷ್ಟು ಓದುಗರ ತಲುಪಲು ಮುಂದಾಗಿದೆ.
ಕನ್ನಡ ಪ್ರಭ ಹುಬ್ಬಳ್ಳಿ ಆವೃತ್ತಿಯಿಂದ ಯಾವ ಪತ್ರಿಕೆಗೆ ತೊಂದರೆಯಾಗಲಿದೆ ಎಂಬ ಲೆಕ್ಕಾಚಾರ ಪತ್ರಕರ್ತರ ಮಧ್ಯೆ ನಡೆದಿದೆ. ಸಂಯುಕ್ತ ಕರ್ನಾಟಕ, ವಿಜಯಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳು ಹುಬ್ಬಳ್ಳಿ ಆವೃತ್ತಿಯನ್ನು ಈಗಾಗಲೇ ಹೊಂದಿವೆ.
***
ರೈಲ್ವೆ ನಿಲ್ದಾಣದಲ್ಲಿ ಕನ್ನಡ ಡಿಂಡಿಮ
ರಾಜಧಾನಿ ಬೆಂಗಳೂರು ನಗರದ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಮಾಯವಾಗುತ್ತಿದೆ ಎಂಬ ಕೂಗಿಗೆ ಪ್ರತಿಸ್ಪಂದನ ವ್ಯಕ್ತವಾಗಿದೆ. ಅದು ಎಂದು ಕಾರ್ಯರೂಪಕ್ಕೆ ಬರುವುದೋ ಗೊತ್ತಿಲ್ಲ.
ನಗರ ರೈಲು ನಿಲ್ದಾಣದಲ್ಲಿ ಕನ್ನಡ ನಾಮ ಫಲಕಗಳನ್ನು ಹಾಕುವುದಾಗಿ, ಕನ್ನಡದಲ್ಲಿರುವ ರಿಸರ್ವೇಷನ್ ಅರ್ಜಿಗಳನ್ನು ಪೂರೈಸುವುದಾಗಿ ನೈರುತ್ಯ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರೈಲ್ವೆ ಅಧಿಕಾರಿಗಳು ಮೇಲ್ಕಂಡ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications