ಖೋಟಾ ನೋಟು ಜಾಲ ಪತ್ತೆ : ಧಾರವಾಡದಲ್ಲಿ ಇಬ್ಬರ ಬಂಧನ
ಧಾರವಾಡ : 10 ಲಕ್ಷ ಬೆಲೆಯ 500ರು. ಖೋಟಾ ನೋಟುಗಳನ್ನು ಪೊಲೀಸರು ಇಂದು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಇರ್ಫಾನ್ ಸೈಯದ್ ಮತ್ತು ಜಾವಿಂದ್ ಹುಸೇನ್ ಮುನಿಯಾರ್ ಎಂದು ಗುರುತಿಸಲಾಗಿದೆ.ನೆಹರು ನಗರದಲ್ಲಿದ್ದ ಅವರ ಮನೆಯಿಂದ ಕಂಪ್ಯೂಟರ್ ಮತ್ತು ಪ್ರಿಂಟಿಗೆ ಬಳಸಲಾಗುವ ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.ತಂಡದಲ್ಲಿದ್ದ ತಪ್ಪಿಸಿಕೊಂಡಿರುವವರನ್ನು ಪೊಲೀಸರು ಹುಡುಕುತ್ತಿದ್ದಾರೆ.
*
ಲೀ ಮೆರೀಡಿಯನ್ ಹೊಟೇಲಿನಲ್ಲಿ ಕನ್ನಡಿಗರಿಗೆ ಕಿರುಕುಳವಾಗುತ್ತಿದೆ ಎಂಬ ಆರೋಪದ ಹಿನ್ನೆಲೆ, ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಹೊಟೇಲಿನ ಎದಿರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ 40 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
*
ಟ್ರಕ್ಕಿಗೆ ರೈಲು ಡಿಕ್ಕಿ : ಇಬ್ಬರಿಗೆ ತೀವ್ರ ಗಾಯ
ಮೈಸೂರು :ರೇಲ್ವೆ ಕ್ರಾಸಿಂಗ್ ದಾಟುತ್ತಿದ್ದ ಲಾರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಕೆ.ಆರ್.ನಗರದ ಬಳಿಯ ಮಂಚನಹಳ್ಳಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.ರೈಲು ಬರುತ್ತಿದ್ದರೂ ದಾಟುವ ಭಂಡ ಧೈರ್ಯ ತೋರಿದ್ದು ಅಪಘಾತಕ್ಕೆ ಕಾರಣವಾಗಿದೆ.
*
ಕರ್ನಾಟಕ ಕರಾವಳಿಯಲ್ಲಿ ಮಳೆರಾಯನ ಅಟ್ಟಹಾಸ
ಬೆಂಗಳೂರು : ಮುಂಗಾರು ಮಳೆಯ ಆರ್ಭಟಕ್ಕೆ ಕರಾವಳಿ ಪೂರ್ತಿ ತೊಯ್ದು ತೊಪ್ಪೆಯಾಗಿದೆ. ಉತ್ತರ ಕರ್ನಾಟಕದ ಒಳನಾಡಿನಲ್ಲೂ ಜನ ಛತ್ರಿಯಿಲ್ಲದೆ ಎಲ್ಲೂ ಓಡಾಡುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಭಟ್ಕಳದಲ್ಲಿ ಭರ್ತಿ 20 ಸೆಂ.ಮೀ. ಮಳೆ ಸುರಿದಿದೆ.ಶಿರಾಲಿ, ಕುಮಟಾ, ಹೊನ್ನಾವರ, ಕಾರವಾರಗಳು ಕೂಡ ಹಿಂದೆ ಬಿದ್ದಿಲ್ಲ.ಮುಂದಿನ 24 ಗಂಟೆಗಳಲ್ಲಿ ದಕ ಮತ್ತು ಉಕದಲ್ಲಿ ಗುಡುಗು ಸಿಡಿಲಿನೊಂದಿಗೆ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
*
ಇನ್ನೆರಡು ದಿನಗಳಲ್ಲಿ ಪ್ರತಿಭಾ-ಶೇಖಾವತ್ ಭೇಟಿ
ನವದೆಹಲಿ : ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ಎನ್ಡಿಎ ಹುರಿದಾಳು ಶೇಖಾವತ್ ಅವರನ್ನು ಭೇಟಿಯಾಗಲಿರುವುದಾಗಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಇಲ್ಲಿ ಆಗಮಿಸಿದ ಅವರು ನೇರವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ತೆರಳಿದರು. ಆದರೆ, ಭೇಟಿ ಸಾಧ್ಯವಾಗಲಿಲ್ಲ.
ಏತನ್ಮಧ್ಯೆ, ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ರಾಷ್ಟ್ರಪತಿ ಚುನಾವಣೆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ರೊಡನೆ ಇಂದು ಚರ್ಚಿಸಿದರು.
*
ನವದೆಹಲಿಗೆ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಲಾಯನ
ಜೈಪುರ : ಯುಪಿಎ ಸರ್ಕಾರದ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ಇಂದು ಬೆಳಿಗ್ಗೆ ನವದೆಹಲಿಗೆ ದೌಡಾಯಿಸಿದ್ದಾರೆ.
ರಾಜಸ್ತಾನದ ರಾಜ್ಯಪಾಲೆ ಇಂದು ಬೆಳಿಗ್ಗೆ 9 ಗಂಟೆಗೆ ರಾಜಧಾನಿಗೆ ವಿಮಾನಪಯಣ ಬೆಳೆಸಿದರು ಎಂದು ರಾಜಭವನದ ವಕ್ತಾರ ತಿಳಿಸಿದ್ದಾರೆ.ಯುಪಿಎಯಿಂದ ನಾಮಾಂಕಿತಗೊಂಡ ನಂತರ ದೆಹಲಿಗೆ ಇದು ಅವರ ಪ್ರಥಮ ಭೇಟಿ. ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಇಂದು ಪ್ರಾರಂಭವಾಗಲಿದ್ದು, ನಾಮಿನೇಶನ್ ಫೈಲ್ ಮಾಡಲು ಜೂನ್ 30 ಕೊನೆಯ ದಿನಾಂಕ.
*
ನೇಸರ್ಗಿಯಲ್ಲಿ ಬಿಸಿಯೂಟ ಉಂಡು 42 ವಿದ್ಯಾರ್ಥಿಗಳು ಅಸ್ವಸ್ಥ
ಬೆಳಗಾವಿ : ಬೈಲಹೊಂಗಲ್ ತಾಲೂಕಿನ ನೇಸರ್ಗಿಯಲ್ಲಿ ಮದ್ಯಾಹ್ನದ ಹಳಸಲು ಬಿಸಿಯೂಟ ಉಂಡು 42 ವಿದ್ಯಾರ್ಥಿಗಳು ಶುಕ್ರವಾರ ಅಸ್ವಸ್ಥರಾಗಿದ್ದಾರೆ.
ಹಳೆಯದಾದ ಆಹಾರಧಾನ್ಯ ಬಳಸಿದ್ದೇ ಊಟ ವಿಷವಾಗಲು ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಧನವಾಡ್ಕರ್ ಹೇಳಿದ್ದಾರೆ. ವಿಷಾಹಾರದ ಸ್ಯಾಂಪಲ್ನ್ನು ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)