ಪೂರ್ಣಚಂದ್ರ ತೇಜಸ್ವಿ ಹೃದಯಾಘಾತದಿಂದ ನಿಧನ
ಬೆಂಗಳೂರು : ನಾಡಿನ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಮೂಡಿಗೆರೆಯ ಕೈಮರದ ತಮ್ಮ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಬಲಿಯಾದರು. 70ವರ್ಷದ ತೇಜಸ್ವಿ ಸಾರಸ್ವತ ಲೋಕದಲ್ಲಿ ಮಾಡಿದ ಕೆಲಸಗಳು ಒಂದೆರಡಲ್ಲ.
ಕಿರುಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ, ಕರ್ವಾಲೋ, ಜುಗಾರಿ ಕ್ರಾಸ್, ಪರಿಸರದ ಕತೆಗಳು ಸೇರಿದಂತೆ ಅನೇಕ ಕೃತಿಗಳ ಮೂಲಕ ತೇಜಸ್ವಿ, ಕನ್ನಡಿಗರ ಮನದಲ್ಲಿ ತಮ್ಮ ಮುದ್ರೆ ಒತ್ತಿದ್ದಾರೆ. ತಮ್ಮ ನವಿರು ಮತ್ತು ಹಾಸ್ಯದಾಟಿಯ ಬರಹದ ಮೂಲಕ ಕತೆ-ಕಾದಂಬರಿ ಪ್ರಿಯರನ್ನು ಅವರು ಸೆಳೆದಿದ್ದಾರೆ.
ಅಕ್ಷರ ಬೇಸಾಯದ ಜೊತೆಗೆ, ಪರಿಸರ ಬೇಸಾಯದಲ್ಲೂ ಅವರಿಗೆ ಎಲ್ಲಿಲ್ಲದ ಆಸಕ್ತಿ. ಪರಿಸರ, ವಿಜ್ಞಾನ, ಪಕ್ಷಿಲೋಕ, ಫೋಟೋಗ್ರಫಿ -ಹೀಗೆ ತೇಜಸ್ವಿ ಆಸಕ್ತಿಗಳು ಹತ್ತಾರು.
ತಮ್ಮ ತಂದೆ ಕುವೆಂಪು ಕುರಿತು ಅವರು ಬರೆದಿರುವ ‘ಅಣ್ಣನ ನೆನಪು’, ಲಂಕೇಶ್ ಪತ್ರಿಕೆಯಲ್ಲಿ ಕೆಲಕಾಲ ಧಾರಾವಾಹಿಯಾಗಿ ಪ್ರಸಾರವಾಗಿತ್ತು. ತಬರನ ಕತೆ, ಕುಬಿ ಮತ್ತು ಇಯಾಲಾ, ಅಬಚೂರಿನ ಪೋಸ್ಟ್ ಆಫೀಸ್ ಮತ್ತಿತರ ಕಾದಂಬರಿಗಳು ಚಲನಚಿತ್ರಗಳಾಗಿ ಹೆಸರು ಮಾಡಿವೆ.
ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ಸಂದಿದ್ದವು.
(ದಟ್ಸ್ ಕನ್ನಡ ವಾರ್ತೆ)