ಗಣಿ ಲಂಚ : ಲೋಕಾಯುಕ್ತರ ತನಿಖೆಗೆ ರೆಡ್ಡಿ ಅಸಹಕಾರ
ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ 150ಕೋಟಿ ರೂ. ಲಂಚ ತಿಂದಿದ್ದಾರೆ ಎಂಬ ಆರೋಪವಿರುವ, ಬಳ್ಳಾರಿ ಗಣಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ವಿಧಾನ ಪರಿಷತ್ತು ಸದಸ್ಯ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಸ್ತುತ ರಾಜ್ಯ ಸರ್ಕಾರ ಲೋಕಾಯುಕ್ತ ತನಿಖೆಗೆ ಗಣಿ ಹಗರಣವನ್ನು ಒಪ್ಪಿಸಿದೆ. ಆ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ. ಹೀಗಾಗಿ ಲೋಕಾಯುಕ್ತ ತನಿಖೆಗೆ ನಾವು ಸಹಕಾರ ನೀಡುವುದಿಲ್ಲ ಎಂದರು.
ಸಿಬಿಐ ತನಿಖೆಯಿಂದಷ್ಟೇ ಸತ್ಯ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನಲ್ಲಿ ಒತ್ತಾಯಿಸುತ್ತೇವೆ. ಸಿಬಿಐ ತನಿಖೆಗೆ ಕೋರ್ಟ್ ನಿರ್ದೇಶನ ನೀಡುವ ಸಾಧ್ಯತೆಗಳಿವೆ. ಈ ಸಂಬಂಧಿ ಪ್ರಕರಣ ಮುಂದಿನ ವಾರ ವಿಚಾರಣೆಗೆ ಬರಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಲೋಕಾಯುಕ್ತರ ಹೇಳಿಕೆ : ಬಳ್ಳಾರಿ ಗಣಿ ಹಗರಣವನ್ನು ನಾವು ಪ್ರಾಮಾಣಿಕವಾಗಿ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುತ್ತೇವೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳನ್ನೂ ಸಹಾ ವಿಚಾರಣೆಗೆ ಗುರಿಪಡಿಸುತ್ತೇವೆ ಎಂದು ಲೋಕಾಯುಕ್ತ ಸಂತೋಷ್ ಹೆಗಡೆ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)