ದೇವೇಗೌಡರ ರಾಜೀನಾಮೆ ಮತ್ತು ಕರ್ನಾಟಕ ರೈತರ ಹಿತ!
ಮೈಸೂರು : ದೇವೇಗೌಡರು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾವೇರಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ನಡೆಸಲಾಗುತ್ತಿರುವ ಹೋರಾಟವನ್ನು ಬಲಪಡಿಸಲು ದೇವೇಗೌಡರು ಮುಂದಾಗಬೇಕು. ರಾಜೀನಾಮೆ ಮೂಲಕ ಇತರೆ ಸಂಸದರಿಗೆ ಮಾದರಿಯಾಗಬೇಕು ಎಂದರು.
ಕಾವೇರಿ ನ್ಯಾಯಮಂಡಳಿ ತೀರ್ಪಿನ ಬಗ್ಗೆ ಬಹುದಿನಗಳ ಕಾಲ ಮೌನವಹಿಸಿದ್ದ ದೇವೇಗೌಡರು, ರಾಜ್ಯ ಸಂಸದರ ಸಭೆಯಲ್ಲೂ ಪಾಲ್ಗೊಂಡಿಲ್ಲ. ಈ ಘಟನೆಗಳು ದೇವೇಗೌಡರ ರೈತಪರ ಕಾಳಜಿಯನ್ನು ಪ್ರದರ್ಶಿಸುತ್ತವೆ ಎಂದು ಗೇಲಿ ಮಾಡಿದರು.
ರಾಜ್ಯ ಮತ್ತು ರೈತರ ಹಿತಕ್ಕಿಂತಲೂ ಮಕ್ಕಳ ಹಿತರಕ್ಷಣೆಗಾಗಿಯೇ ದೇವೇಗೌಡರು ರಾಜಕೀಯ ಮಾಡುತ್ತಿದ್ದಾರೆ. ಕಾವೇರಿ ಬಗ್ಗೆ ಇಷ್ಟು ದಿನಗಳಾದರೂ ಸ್ಪಷ್ಟವಾದ ನಿಲುವು ಪ್ರದರ್ಶಿಸಲು ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ತೀರ್ಪನ್ನು ಸ್ವಾಗತಿಸಿದ್ದೇವೆ ಅಥವಾ ನಿರಾಕರಿಸಿದ್ದೇವೆ ಎಂದು ಹೇಳಲು ಇನ್ನೂ ಎಷ್ಟು ದಿನಗಳು ಬೇಕೋ ಎಂದು ವಿಶ್ವನಾಥ್ ಹೇಳಿದರು.
(ಯುಎನ್ಐ)