ಕಟ್ಟೆಚ್ಚರದ ಮಧ್ಯೆರಾಜಧಾನಿಯಲ್ಲಿ 58ನೇ ಗಣರಾಜ್ಯೋತ್ಸವ
ನವದೆಹಲಿ : ಬಿಗಿ ಬಂದೋಬಸ್ತಿನ ನಡುವೆ 58ನೇ ಗಣರಾಜ್ಯೋತ್ಸವವನ್ನು ರಾಜಧಾನಿ ನಗರದಲ್ಲಿ, ಸಂಭ್ರಮ ಸಡಗರಗಳಿಂದ ಶುಕ್ರವಾರ ಆಚರಿಸಲಾಯಿತು.
ನವದೆಹಲಿಯ ಪೆರೇಡ್ ಮೈದಾನ, ಇಂಡಿಯಾ ಗೇಟ್ ಮತ್ತಿತರ ಪ್ರದೇಶಗಳಲ್ಲಿ ಬಿಗಿ ಭದ್ರತೆವಹಿಸಲಾಗಿದೆ. ಮಾನವ ಬಾಂಬ್ ಸೇರಿದಂತೆ ಉಗ್ರರ ಚಟುವಟಿಕೆಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಲಾಗಿದೆ. ವಿಜಯಚೌಕದಿಂದ ಕೆಂಪುಕೋಟೆವರೆಗಿನ ಮೆರವಣಿಗೆ ಹಿನ್ನೆಲೆಯಲ್ಲಿ 400 ಹಿರಿಯ ಅಧಿಕಾರಿಗಳು ಸೇರಿದಂತೆ 15ಸಾವಿರ ಪೊಲೀಸರು ಕಟ್ಟೆಚ್ಚರವಹಿಸಿದ್ದರು.
ಉಗ್ರರ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಪೊಲೀಸ್ ವಾಹನಗಳು ನಗರದಲ್ಲಿ ಗಸ್ತು ತಿರುಗುತ್ತಿವೆ. ರೈಲು, ವಿಮಾನ ನಿಲ್ದಾಣ ಮತ್ತಿತರ ಸೂಕ್ಷ್ಣ ಪ್ರದೇಶಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ವಾಹನಗಳ ತಪಾಸಣೆ ಸೇರಿದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.
ಗಣರಾಜ್ಯೋತ್ಸವದ ಮುನ್ನಾ ದಿನವಾದ ಗುರುವಾರ ರಾತ್ರಿ ನವದೆಹಲಿಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿ, ಅವನಿಂದ 2.5ಕಿಲೋ ಆರ್ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ವರದಿ : ನಗರದ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ತುಂಬಿ ತುಳುಕುತ್ತಿದೆ. ಶುಕ್ರವಾರ ಬೆಳಗ್ಗೆ 9.04ರಲ್ಲಿ ತೆರೆದ ಜೀಪಿನಲ್ಲಿ ರಾಜ್ಯಪಾಲರು ಕವಾಯತು ವೀಕ್ಷಿಸಿದರು. ನಂತರ ಭಾಷಣ ಮಾಡಿದರು. ವರ್ಣರಂಜಿತ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೈದಾನದಲ್ಲಿ ನಡೆದವು.
(ಏಜನ್ಸೀಸ್)