ಹತ್ತು ಲಕ್ಷ ಪ್ರಕರಣಗಳು ಕೋರ್ಟ್ನಲ್ಲಿ ಕೊಳೆಯುತ್ತಿವೆ!
ಬೆಂಗಳೂರು : ಕರ್ನಾಟಕದ ನ್ಯಾಯಾಲಯಗಳಲ್ಲಿ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ಗಳು ಸೇರಿ ಸುಮಾರು 10 ಲಕ್ಷಮೊಕದ್ದಮೆಗಳ ವಿಚಾರಣೆ ಬಾಕಿ ಉಳಿದಿವೆ ಎಂದು ಗೃಹ ಸಚಿವ ಎಂ.ಪಿ. ಪ್ರಕಾಶ್ ಹೇಳಿದ್ದಾರೆ.
ಅಖಿಲ ಭಾರತ ಕಾನೂನು ಸಚಿವರ ಸಮ್ಮೇಳನಕ್ಕಾಗ ಹೈದರಾಬಾದ್ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಸುಮಾರು 2.55 ಕೋಟಿ ಕೇಸುಗಳು ದೇಶದ ವಿವಿಧ ನ್ಯಾಯಲಯಗಳಲ್ಲಿ ವಿಚಾರಣೆಗಾಗಿ ಕಾದಿವೆ. ಸುಪ್ರೀಂ ಕೋರ್ಟ್ನಲ್ಲಿ ಸುಮಾರು 37,045, ಇತರ ಕೆಳ ನ್ಯಾಯಾಲಯಗಳಲ್ಲಿ ಸುಮಾರು 48.04 ಲಕ್ಷ ಕೇಸುಗಳ ವಿಚಾರಣೆ ಬಾಕಿ ಉಳಿದಿದೆ. ಹೈದರಾಬಾದ್ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಗಡಿ ವಿವಾದ : ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಮೊಕದ್ದಮೆಯನ್ನು, ಸುಪ್ರೀಂ ಕೋರ್ಟ್ ಜ.22 ರಂದು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ರಾಜ್ಯದ ಪರ ವಕಾಲತ್ತು ವಹಿಸಲು ಬೇಕಾದ ಅಗತ್ಯ ದಾಖಲೆಗಳನ್ನು ಕಾನೂನು ಇಲಾಖೆ ಸಿದ್ಧಪಡಿಸಿದೆ ಎಂದು ಎಂ.ಪಿ.ಪ್ರಕಾಶ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)