ಕ್ರಿಕೆಟ್ : ಗಂಗೂಲಿ ಪುನರಾಗಮನ, ಸೆಹ್ವಾಗ್ಗೆ ಹಿಂಬಡ್ತಿ
ನವದೆಹಲಿ : ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡಕ್ಕೆ ಮರಳಿದ್ದು, ವೀರೇಂದ್ರ ಸೆಹ್ವಾಗ್ ಉಪನಾಯಕ ಪಟ್ಟದಿಂದ ಹಿಂಬಡ್ತಿ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಸರಣಿಗೆ ಗುರುವಾರ ತಂಡವನ್ನು ಆಯ್ಕೆ ಮಾಡಲಾಯಿತು. ಸುಮಾರು 10ತಿಂಗಳ ಬಳಿಕ ಗಂಗೂಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆದಿದ್ದಾರೆ. ಉಪನಾಯಕ ಸ್ಥಾನದಲ್ಲಿದ್ದ ವೀರೇಂದ್ರ ಸೆಹ್ವಾಗ್ಗೆ ಹಿಂಬಡ್ತಿ ನೀಡಿ, ಆ ಜವಾಬ್ದಾರಿಯನ್ನು ವಿ.ವಿ.ಎಸ್.ಲಕ್ಷ್ಮಣ್ಗೆ ವಹಿಸಲಾಗಿದೆ.
ಮೊಹಮ್ಮದ್ ಕೈಫ್, ಸುರೇಶ್ ರೈನಾ, ದಿನೇಶ್ ಮೋಂಗಿಯಾ, ಅಜಿತ್ ಅಗರ್ಕರ್ ಅವರನ್ನು ಕೈಬಿಡಲಾಗಿದ್ದು, ಜಹೀರ್ಖಾನ್, ಗೌತಮ್ ಗಂಭೀರ್, ರುದ್ರಪ್ರತಾಪ್ ಸಿಂಗ್ ಸ್ಥಾನಪಡೆದಿದ್ದಾರೆ.
ದಾದಾ ಆಯ್ಕೆ ಸಮರ್ಥಿಸಿಕೊಳ್ಳುವರೇ...? : ಒಂದೆಡೆ ಭಾರತ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಇನ್ನೊಂದೆಡೆ ಪರ-ವಿರೋಧದ ನಡುವೆ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ವೇಗಿಗಳ ಎದುರು ಆಡಲು ತಿಣುಕಾಡುತ್ತಾರೆ ಎಂಬ ಮಾತು ಮುಂದುವರಿದಿದೆ. ಆದರೆ, ಗಂಗೂಲಿ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳುವರೇ ಎಂಬ ಕುತೂಹಲ ಮಾತ್ರ ಉಳಿದಿದೆ.
(ಏಜನ್ಸೀಸ್)