ಎಂ.ಸಿ.ಭಂಡಾರೆ ಕರ್ನಾಟಕದ ಮುಂದಿನ ರಾಜ್ಯಪಾಲ?
ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯಪಾಲರು ಬದಲಾಗುತ್ತಿದ್ದಾರೆ. ಪ್ರಸ್ತುತ ರಾಜ್ಯಪಾಲರಾಗಿರುವ ಟಿ.ಎನ್.ಚತುರ್ವೇದಿಯವರ ಸ್ಥಾನದಲ್ಲಿ, ರಾಜ್ಯಸಭೆಯ ಮಾಜಿ ಸದಸ್ಯ ಎಂ.ಸಿ.ಭಂಡಾರೆ ನೇಮಕವಾಗಲಿದ್ದಾರೆ ಎನ್ನುವ ಇಂಗಿತಗಳು ದಿಲ್ಲಿಯಿಂದ ಬರುತ್ತಿವೆ.
ರಾಜ್ಯಪಾಲ ಚತುರ್ವೇದಿಯವರ ಅಧಿಕಾರಾವಧಿ ಆಗಸ್ಟ್ 2007ಕ್ಕೆ ಕೊನೆಗೊಳ್ಳಲಿದೆ. ಆದರೆ ಈ ಮಧ್ಯೆ ತಮಗೆ ವಿಶ್ರಾಂತಿ ಬೇಕೆಂದು ಅವರು ಹೇಳಿದ್ದಾರೆ.
ನಾನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಿದೆ. ಹಾಗಾಗಿ ಹಲವು ತಿಂಗಳುಗಳು ವಿಶ್ರಾಂತಿ ಬೇಕಾಗುತ್ತದೆ. ಆದ್ದರಿಂದ ಜನವರಿ ನಂತರ ಅಧಿಕಾರದಲ್ಲಿ ಮಂದುವರಿಯಲು ನನಗೆ ಇಚ್ಛೆ ಇಲ್ಲ ಎಂದು ಚತುರ್ವೇದಿ, ಕೇಂದ್ರಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಭಂಡಾರೆ ಹೆಸರು ಪ್ರಸ್ತಾಪಗೊಂಡಿದೆ. ಅವರ ಹೆಸರು ಮಾತ್ರವಲ್ಲದೇ, ಇನ್ನೂ ಕೆಲವು ಹೆಸರುಗಳು ಕೇಳಿ ಬರುತ್ತಿವೆ.
ಭಂಡಾರೆಯವರು ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಖಂಡ. ಕರ್ನಾಟಕದ ಎಸ್.ಎಂ.ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದು, ಅಲ್ಲಿನ ಭಂಡಾರೆ ರಾಜ್ಯಕ್ಕೆ ಬಂದರೆ ಅಚ್ಚರಿಯೇನಿಲ್ಲ.
(ದಟ್ಸ್ ಕನ್ನಡ ವಾರ್ತೆ)