ಚುನಾವಣೆಗೆ ನಾವು ಸಿದ್ಧ : ಬಿಜೆಪಿ ರಾಜ್ಯಾಧ್ಯಕ್ಷರ ಎಚ್ಚರಿಕೆ
ಬೆಂಗಳೂರು : ರಾಜ್ಯದಲ್ಲಿನ ದೋಸ್ತಿ ಸರ್ಕಾರದ ಪಾಲುದಾರ ಪಕ್ಷವಾದ ಬಿಜೆಪಿ, ದತ್ತ ಮಾಲಾ ಘಟನೆಯ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದೆ. ಸರ್ಕಾರದಿಂದ ಹೊರಬರುವುದಾಗಿ ಬೆದರಿಕೆಯಾಡ್ಡಿದೆ.
ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ನಮಗೆ ಅಧಿಕಾರಕ್ಕಿಂತಲೂ, ಪಕ್ಷದ ತತ್ವ ಸಿದ್ಧಾಂತಗಳೇ ಮುಖ್ಯ. ನಾವು ಚುನಾವಣೆಗೆ ಸಿದ್ಧರಾಗಿಯೇ ಇದ್ದೇವೆ ಎಂದರು.
ಸರ್ಕಾರವೇ ಬೇರೆ, ಪಕ್ಷದ ಸಿದ್ಧಾಂತಗಳೇ ಬೇರೆ. ಸರ್ಕಾರದ ವಿರೋಧದ ನಡುವೆಯೂ ಚಿಕ್ಕಮಗಳೂರಿನಲ್ಲಿ ಸಂಕೀರ್ತನಾ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಖಂಡನೀಯ. ಈ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ನಿಜಾಂಶವಿಲ್ಲ ಎಂದರು.
ಶಾಂತಿಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಎಂ. ವೀರಪ್ಪ ಮೊಯಿಲಿ ಮತ್ತು ಕಾಗೋಡು ತಿಮ್ಮಪ್ಪ , ಅರ್ಥಹೀನ ಹೇಳಿಕೆಗಳನ್ನು ನೀಡಿದ್ದಾರೆ. ಮೊಯಿಲಿ ಅವರಿಗೆ ಮಂಗಳೂರು ಎಲ್ಲಿದೆ ಮತ್ತು ಹೇಗಿದೆ ಎಂಬುದು ಸರಿಯಾಗಿ ಗೊತ್ತಿಲ್ಲ ಎಂದು ಸದಾನಂದ ಗೌಡ ಗೇಲಿ ಮಾಡಿದರು.
ಮತ್ತೆ ಸಂಕೀರ್ತನಾ ಯಾತ್ರೆ : ದತ್ತ ಮಾಲಾ ಹಿನ್ನೆಲೆಯಲ್ಲಿ ಸಂಕೀರ್ತನಾ ಯಾತ್ರೆಯನ್ನು ಚಿಕ್ಕಮಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದೆ. ಯಾರದೇ ಪ್ರತಿರೋಧಕ್ಕೂ ಬಗ್ಗುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)