ಸಂಸತ್ತಿನಲ್ಲಿ ಅಯೋಧ್ಯೆ ಪ್ರಕರಣದ ಹಿನ್ನೆಲೆ ಗೊಂದಲ,ಗದ್ದಲ,ಕೂಗಾಟ
ಸಂಸತ್ತಿನಲ್ಲಿ ಅಯೋಧ್ಯೆ ಪ್ರಕರಣದ ಹಿನ್ನೆಲೆ ಗೊಂದಲ,ಗದ್ದಲ,ಕೂಗಾಟ
ಬಿಜೆಪಿಯಿಂದ ಜೈ ಶ್ರೀರಾಮ್ ಘೋಷಣೆ, ಸಮಾಜವಾದಿ ಪಕ್ಷದಿಂದ ಸಭಾತ್ಯಾಗ
ಶೂನ್ಯವೇಳೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಮ್ಜೀ ಲಾಲ್ ಸುಮನ್ ಮಾತನಾಡಿ, ಕೆಲವರು ಈ ದಿನವನ್ನು ಶೋಕದಿಂದ ಆಚರಿಸಿದರೆ, ಮತ್ತೆ ಕೆಲವರು ವಿಜಯೋತ್ಸವದ ದಿನವಾಗಿ ಆಚರಿಸುತ್ತಾರೆ ಎಂದರು.
ಈ ಮಾತಿನಿಂದ ಕೆರಳಿದ ಬಿಜೆಪಿ ಮತ್ತು ಶಿವಸೇನೆ ನಾಯಕರು, ಸಭಾಧ್ಯಕ್ಷರ ಮುಂದಿನ ಪೀಠಕ್ಕೆ ನುಗ್ಗಿದರು. ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದು ಕೊಂಡ ಬಿಜೆಪಿ ಸಂಸದರು, ಜೈಶ್ರೀರಾಮ್ ಘೋಷಣೆ ಕೂಗಿದರು. ಸಮಾಜವಾದಿ ಪಾರ್ಟಿ ಸಂಸದರು ಸಭಾತ್ಯಾಗ ಮಾಡಿದರು.
ಕಡತದಿಂದ ಆಯೋಧ್ಯೆಗೆ ಸಂಬಂಧಿಸಿದ ಹೇಳಿಕೆಗಳನ್ನು ತೆಗೆದು ಹಾಕುವಂತೆ ಒತ್ತಾಯಗಳು ಕೇಳಿ ಬಂದವು. ಸಭಾಧ್ಯಕ್ಷ ಸೋಮನಾಥ ಚಟರ್ಜಿ ಗೊಂದಲ ನಿವಾರಣೆಗೆ ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಆಯೋಧ್ಯೆ ವಿವಾದ ಸುಪ್ರಿಂಕೋರ್ಟ್ನಲ್ಲಿದೆ ಈ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದು ಚಟರ್ಜಿ ಮನವಿ ಮಾಡಿದರು. ಶಿವಸೇನೆ ಸಂಸದ ಚಂದ್ರಕಾಂತ್ಘೋರೆ, ಆಯೋಧ್ಯೆ ರಾಮನ ಜನ್ಮಸ್ಥಳ. ರಾಮಜನ್ಮಭೂಮಿಯಲ್ಲಿ ದೇವಸ್ಥಾನ ಕಟ್ಟಬೇಕು ಎಂದರು.
ಬಿಗಿ ಬಂದೋಬಸ್ತು : ಬಾಬರಿ ಮಸೀದಿ ಧ್ವಂಸದ ದಿನವಾದ ಇಂದು ಅಹಿತ ಕರ ಘಟನೆಗಳು ಸಂಭವಿಸದಂತೆ ದೇಶವ್ಯಾಪಿ ಬಿಗಿ ಪೋಲೀಸ್ ಬಂದೋಬಸ್ತು ಹಾಕಲಾಗಿತ್ತು. ವಾಹನ ತಪಾಸಣೆ ನಡೆಸಲಾಗುತ್ತಿತ್ತು.
ಚೆನ್ನೈ, ತಂಜಾವೂರು, ಕೊಯಮತ್ತೂರು ಮತ್ತಿತರ ಪ್ರದೇಶಗಳಲ್ಲಿ ನಿಷೇದಾಜ್ಞೆ ಉಲ್ಲಂಘಿಸಿ ಮೆರವಣಿಗೆಗೆ ಯತ್ನಿಸಿದ ಸಾವಿರಾರು ಜನರನ್ನು ಪೋಲೀಸರು ಬಂಧಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications