ಬೆಸ್ಕಾಂ-ಕೇಬಲ್ ಆಪರೇಟರ್ ‘ಟಗ್ ಆಫ್ ವಾರ್’ ಅನ್ಇಂಟರಪ್ಟೆಡ್
ಬೆಸ್ಕಾಂ-ಕೇಬಲ್ ಆಪರೇಟರ್ ‘ಟಗ್ ಆಫ್ ವಾರ್’ ಅನ್ಇಂಟರಪ್ಟೆಡ್
ಸಚಿವ ಎಚ್.ಡಿ.ರೇವಣ್ಣ ಮತ್ತು ಕೇಬಲ್ ಆಪರೇಟರ್ಗಳ ನಡುವಿನ ಮಾತುಕತೆ ವಿಫಲ
ಲೋಕೋಪಯೋಗಿ ಮತ್ತು ಇಂಧನ ಸಚಿವ ಎಚ್.ಡಿ.ರೇವಣ್ಣ ಮತ್ತು ಕೇಬಲ್ ಆಪರೇಟರುಗಳ ಒಕ್ಕೂಟದ ನಡುವೆ ಶುಕ್ರವಾರ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಕೇಬಲ್ ತುಂಡರಿಸುವುದನ್ನು ನಿಲ್ಲಿಸುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಆಪರೇಟರುಗಳು ಸೆಡ್ಡು ಹೊಡೆದಿದ್ದಾರೆ. ಬೆಸ್ಕಾಂ ಕೂಡ ಕೇಬಲ್ ಕತ್ತರಿಸುವ ಯಾಗವನ್ನು ಅವ್ಯಾಹತವಾಗಿ ಮುಂದುವರಿಸಿದೆ.
ಮಾತುಕತೆ ವಿಫಲವಾಗುತ್ತಿದ್ದಂತೆ ಕೇಬಲ್ ಆಪರೇಟರುಗಳು ಬೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು. ಇದರಿಂದಾಗಿ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಸಂಘರ್ಷಮಯ ವಾತಾವರಣ ಉಂಟಾಗಿತ್ತು. ಇಂದಿರಾನಗರದ ಅನೀಶ್ ಸಾವಿಗೆ ಕೇಬಲ್ ಕಾರಣವಲ್ಲ ಎಂದು ಕೂಗಾಡಿದರು.
ಅನೀಶ್ ಸಾವಿಗೆ ಕೇಬಲ್ ಕಾರಣ ಎಂದು ಇಂದಿರಾನಗರದ ನಿವಾಸಿಗಳು ಸರ್ಕಾರಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಕಾರಿಗಳು ವಿದ್ಯುತ್ ತಂತಿಗಳಿಗೆ ಅಂಟಿಕೊಂಡಿರುವ ಕೇಬಲ್ಗಳನ್ನು ಕಿತ್ತುಹಾಕುವಂತೆ ಆದೇಶಿಸಿದ್ದಾರೆ.
ಹೊಸ ಕಾಯ್ದೆ : ಅವ್ಯಾಹತವಾಗಿರುವ ಕೇಬಲ್ ಅಕ್ರಮ ದಂಧೆಯನ್ನು ನಿಯಂತ್ರಣದಲ್ಲಿ ತರಲು ಹೊಸ ಕಾಯ್ದೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ರೇವಣ್ಣ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.
ಆಂಧ್ರ ಮತ್ತು ತಮಿಳುನಾಡಿನಲ್ಲಿ ಜಾರಿಯಲ್ಲಿರುವಂತೆ ಕರ್ನಾಟಕದಲ್ಲಿಯೂ ಕೇಬಲ್ ನಿಯಂತ್ರಣಾ ಕಾಯ್ದೆ ತರುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಆ ರಾಜ್ಯದಲ್ಲಿರುವ ಕಾಯ್ದೆಯನ್ನು ತರಿಸಿ ಅಧ್ಯಯನ ಸಡೆಸಿ ಮುಖ್ಯಮಂತ್ರಿಯಾಂದಿಗೆ ಚರ್ಚಿಸಿದ ನಂತರ ಕಾಯ್ದೆ ಕುರಿತಂದೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಮತ್ತು ಅನೀಶ್ ಸಾವಿನ ಹಿನ್ನೆಲೆಯ ನಿಜ ಸಂಗತಿಯನ್ನು ತಿಳಿಯಲು ತನಿಖೆಗೆ ಆದೇಶ ನೀಡಲಾಗಿದೆ ಎಂದು ರೇವಣ್ಣ ಅವರು ವಿವರಿಸಿದರು.
ಕೇಬಲ್ ರಗಳೆ ಇಂದು ನಿನ್ನೆಯದಲ್ಲ. ಕ್ರಿಕೆಟ್ ಪ್ರಸಾರ ಕುರಿತಂತೆ ಈ ಹಿಂದೆಯೂ ಕೇಬಲ್ ಆಪರೇಟರುಗಳು ಕ್ಯಾತೆ ತೆಗೆದಿದ್ದಿದೆ. ಈಗಲೂ ಏಷ್ಯಾ ಕಪ್ ಕ್ರಿಕೆಟ್ ನೋಡಲು ಅವಕಾಶ ಸಿಗದೆ ಕ್ರಿಕೆಟ್ ಪ್ರೇಮಿಗಳು ವಂಚಿತರಾಗಿದ್ದಾರೆ. ಎಂದೂ ಮಿಸ್ ಮಾಡದ ಧಾರಾವಾಹಿಗಳ ಎರಡು ದಿನಗಳ ಕಂತನ್ನು ಗೃಹಿಣಿಯರು ಮಿಸ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಬಲ್ ಕುರಿತಂತೆ ಕಾಯ್ದೆ ತರುವುದು ಕೂಡ ಎಲ್ಲರ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆ.
(ಇನ್ಫೋವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications