ಯಾರೇ ಕೂಗಾಡಲಿ, ತೊಗಾಡಿಯಾ ಬಂದೇಬರ್ತಾರೆ- ಮುತಾಲಿಕ್
ಯಾರೇ ಕೂಗಾಡಲಿ, ತೊಗಾಡಿಯಾ ಬಂದೇಬರ್ತಾರೆ- ಮುತಾಲಿಕ್
ಸದನದಲ್ಲೂ ತೊಗಾಡಿಯಾ ತಗಾದೆ : ವಿಧಾನಸಭೆಯ ಕಲಾಪ ಗೋವಿಂದ
ಪ್ರಚೋದನೆ ನೀಡುವಂಥಾ ಭಾಷಣ ಕೋಮು ಸೌಹಾರ್ದತೆ ಭಂಗ ಪಡಿಸಬಹುದು ಎಂದು ಕಾರಣ ಕೊಟ್ಟು, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತೊಗಾಡಿಯಾ ಅವರು ಬಿಜಾಪುರಕ್ಕೆ ಬರುವಂತಿಲ್ಲ ಎಂದು ನಿಷೇಧ ಹೇರಿದ್ದಾರೆ. ಇದನ್ನು ಪ್ರಮೋದ್ ಮುತಾಲಿಕ್ ವಿರೋಧಿಸಿದರಲ್ಲದೆ, ಯಾವ ನಿಷೇಧಕ್ಕೂ ಜಗ್ಗುವುದಿಲ್ಲ ಎಂದು ಎಚ್ಚರಿಸಿದರು. ಸ್ಥಳೀಯ ಶಾಸಕ ಮತ್ತು ವಕ್ಫ್ ಸಚಿವ ಎಂ.ಎಲ್.ಉಸ್ತಾದ್ ಅವರ ಒತ್ತಡಕ್ಕೆ ಮಣಿದು ಸರ್ಕಾರ ಈ ರೀತಿ ವರ್ತಿಸುತ್ತಿದೆ ಎಂದು ದೂರಿದರು.
ಬಿಜಾಪುರ ರ್ಯಾಲಿಯ ಸ್ವಾಗತ ಸಮಿತಿ ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ.
ವಿಧಾನಸಭೆಯಲ್ಲೂ ತೊಗಾಡಿಯಾ ತೊಗಾಡಿಯಾ
ಬೆಂಗಳೂರು ವರದಿ : ವಿಧಾನಸಭೆಯಲ್ಲೂ ಶುಕ್ರವಾರ (ಜು.25) ತೊಗಾಡಿಯಾ ನಿಷೇಧದ್ದೇ ಕಿರಿಕ್ಕು. ಭಾರತೀಯ ಜನತಾ ಪಕ್ಷ (ಬಿಜೆಪಿ) ದ ಸದಸ್ಯರು ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯಿ ತೊಗಾಡಿಯಾ ಅವರಿಗೆ ಹೇರಿರುವ ನಿಷೇಧವನ್ನು ತೆಗೆದು ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ತೊಗಾಡಿಯಾ ಪ್ರವಾಸಕ್ಕೆ ನಿಷೇಧ ಹೇರುವ ಮೂಲಕ ಅಲ್ಪಸಂಖ್ಯಾತರನ್ನು ಸರ್ಕಾರ ಓಲೈಸುತ್ತಿದೆ ಎಂದು ದೂರಿದರು. ಒತ್ತಾಯದ ಕೂಗಾಟದಿಂದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ.
ಎರಡು ಬಾರಿ ಕಲಾಪಗಳನ್ನು ಮುಂದೂಡಿದ ನಂತರವೂ ಪರಿಸ್ಥಿತಿ ತಣ್ಣಗಾಗಲಿಲ್ಲ. ಯಥಾ ಪ್ರಕಾರ ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಅವರ ಮನವಿ ಯಾರ ಕಿವಿಗೂ ಬೀಳಲಿಲ್ಲ. ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಗಾಂಧಿ ಸಂತತಿ ಉಳಿಯಲಿ, ನಾಥೂರಾಮ್ ಗೋಡ್ಸೆ, ತೊಗಾಡಿಯಾ ಸಂತತಿ ಅಳಿಯಲಿ ಎಂದು ಗೃಹಸಚಿವ ಖರ್ಗೆ ಸದನದಲ್ಲಿ ಜೋರಾಗಿ ಶಾಪ ಹಾಕಿದ್ದು ಇವತ್ತಿನ ವಿಶೇಷ !
ಈ ಬಾರಿಯ ಅಧಿವೇಶನದಲ್ಲಿ ಕಲಾಪ ನಡೆದಿರುವುದಕ್ಕಿಂತ ಮುಂದೂಡಲಾಗಿರುವುದೇ ಹೆಚ್ಚು. ಪ್ರಜೆಗಳ ದುಡ್ಡನ್ನು ದೇವರೇ ಕಾಪಾಡಬೇಕು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications