ಉಳ್ಳಾಲ ಕಡಲ ಕೊರೆತದಿಂದ ಕಿನಾರೆ ರಕ್ಷಣೆಗೆ ಫ್ರಾನ್ಸ್ ಮುಂದು
ಉಳ್ಳಾಲ ಕಡಲ ಕೊರೆತದಿಂದ ಕಿನಾರೆ ರಕ್ಷಣೆಗೆ ಫ್ರಾನ್ಸ್ ಮುಂದು
ಕಡಲ ತೀರದ ರಕ್ಷಣೆಗೆ ರಾಮಬಾಣ ಸ್ಟ್ಯಾಬಿಪ್ಲೇಜ್ ತಂತ್ರಜ್ಞಾನ
ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ವಸಂತ್ ವಿ. ಸಾಲಿಯಾನ್ ಜುಲೈ 02, ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸ್ಟ್ಯಾಬಿಪ್ಲೇಜ್ ತಂತ್ರಜ್ಞಾನದಿಂದ ಕಡಲ ಕೊರೆತದಿಂದ ಕಿನಾರೆಗಳನ್ನು ರಕ್ಷಿಸುವ ಪೈಲಟ್ ಯೋಜನೆಗೆ ಒಟ್ಟು 83 ಕೋಟಿ ರುಪಾಯಿ ವೆಚ್ಚವಾಗಲಿದೆ. ಈ ಯೋಜನೆಯಲ್ಲಿ ಪಶ್ಚಿಮ ಕರಾವಳಿಯ ಉಳ್ಳಾಲ- ಕೋಟೆಪುರ ನಡುವಿನ 1.5 ಕಿ.ಮೀ. ಉದ್ದದ ಕಡಲ ಕಿನಾರೆಯ ಸಂರಕ್ಷಣೆ ಮಾಡಲಾಗುತ್ತದೆ ಎಂದು ಸಾಲಿಯಾನ್ ಹೇಳಿದರು.
ರಾಜ್ಯ ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ತಂಡದ ಜೊತೆ ಸಚಿವ ಸಾಲಿಯಾನ್ ಗುರುವಾರ (ಜು.03) ಫ್ರಾನ್ಸ್ಗೆ ತೆರಳಲಿದ್ದಾರೆ. ಅಲ್ಲಿ ಕಡಲ ಕಿನಾರೆಯನ್ನು ಸ್ಯಾಬಿಪ್ಲೇಜ್ ತಂತ್ರಜ್ಞಾನದಿಂದ ರಕ್ಷಿಸಿರುವ ಪರಿಯನ್ನು ವೀಕ್ಷಿಸಲಿದ್ದಾರೆ.
ಈ ಮುಂಚೆ ಫ್ರಾನ್ಸ್ನ ಹಿರಿಯ ತಾಂತ್ರಿಕ ಅಧಿಕಾರಿ ಎಸ್ಪೇಸ್ ಪುರ್ ರಾಜ್ಯಕ್ಕೆ ಭೇಟಿ ನೀಡಿ, ಕಡಲ ಕೊರೆತ ತಡೆಗಟ್ಟುವುದಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಉಳ್ಳಾಲ- ಕೋಟೆಪುರ ಕಡಲ ಕೊರೆತದಿಂದಾಗಿ ಕಿನಾರೆಯಲ್ಲಿನ ಜನರ ಜೀವ, ಆಸ್ತಿ ಪಾಸ್ತಿಗೆ ಹಾನಿಯಾಗುವುದು ಮಾಮೂಲಾಗಿದೆ. ಕಡಲ ಗೋಡೆಗಳನ್ನು ಕಟ್ಟುವ ಮೂಲಕ ಕೊರೆತ ನಿಯಂತ್ರಿಸುವ ಸಾಂಪ್ರದಾಯಿಕ ವಿಧಾನ ಈಗ ವಿಫಲವಾಗಿರುವುದರಿಂದ ಸರ್ಕಾರ ಹೊಸ ತಂತ್ರಜ್ಞಾನದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಸ್ಟ್ಯಾಬಿಪ್ಲೇಜ್ ತಂತ್ರಜ್ಞಾನದಲ್ಲಿ ಮೊಟ್ಟೆಯಾಕಾರದ ದೃಢ ಆಕೃತಿಗಳನ್ನು ಕಡಲ ಕಿನಾರೆಯಲ್ಲಿಡಲಾಗುವುದು. ಈ ಆಕೃತಿಗಳನ್ನು ವಿಶೇಷ ರೀತಿಯಲ್ಲಿ (ಜಿಯೋಕಾಂಪೋಸಿಟ್) ತಯಾರಿಸಲಾಗಿರುತ್ತದೆ. ಸಾಗರದ ದೊಡ್ಡ ಅಲೆಗಳ ಆರ್ಭಟವನ್ನು ತಗ್ಗಿಸಿ, ಹೆಚ್ಚು ನೀರು ಕಡಲನ್ನು ಕೊರೆಯದಂತೆ ಮಾಡುತ್ತದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications