ಜೋಭದ್ರರನ್ನ ಕಸುಬುದಾರರನ್ನಾಗಿಸಿ : ‘ವಿಪ್ರೋ’ತ್ತಮ
ಬೆಂಗಳೂರು : ರಜೆ ಹಾಕಿ ಮಜಾ ಮಾಡುವ ಮಂದಿಯನ್ನು ಬೆವರು ಸುರಿಸಿ ದುಡಿಯುವ ಕಸುಬುದಾರರನ್ನಾಗಿ ಪರಿವರ್ತಿಸಬೇಕು ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಕರೆ ಕೊಟ್ಟಿದ್ದಾರೆ.
ಭಾರತೀಯ ಉದ್ದಿಮೆದಾರರ ಒಕ್ಕೂಟ (ಸಿಐಐ) ದ ವಾರ್ಷಿಕ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ, ಶನಿವಾರ ಪ್ರೇಂಜಿ ಮಾತಾಡಿದರು. ‘ಪ್ರತಿಭೆ- ಕಾರ್ಪೊರೇಟ್ ಪೋಟಿಯ ಹೊಸ ಮಾದರಿ’ ಎಂಬ ವಿಷಯವಾಗಿ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.
ಭಾರತ ತನ್ನ ಉನ್ನತ ಪ್ರತಿಭೆಯಿಂದ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಬರುವ ದಿನಗಳಲ್ಲಿ ಔಷಧಿ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ದೇಶ ಯಶಸ್ಸು ಕಾಣಲಿದೆ. ಜೀವನದಲ್ಲಿ ಮರುಸೃಷ್ಟಿ ಸಾಧ್ಯವಿಲ್ಲದ್ದು ಎಂದರೆ ಪ್ರತಿಭೆ. ಅದನ್ನು ತುಕ್ಕು ಹಿಡಿಯಲು ಅವಕಾಶ ಕೊಡಬೇಡಿ ಎಂದು ಪ್ರೇಂಜಿ ಕರೆ ಕೊಟ್ಟರು.
ಅಗತ್ಯ ಮೌಲ್ಯಗಳನ್ನು ಬದಿಗೊತ್ತಿದವ ಉತ್ತಮ ನಾಯಕನಾಗಲಾರ. 1970ರಲ್ಲಿ 300 ಸಿಬ್ಬಂದಿ ಇದ್ದ ವಿಪ್ರೋ ವಾರ್ಷಿಕ 20 ಕೋಟಿ ರುಪಾಯಿ ವಹಿವಾಟು ನಡೆಸುತ್ತಿತ್ತು. ಇವತ್ತು ಕಂಪನಿ ಏನೇ ಎತ್ತರಕ್ಕೆ ಏರಿದ್ದರೂ ಅದಕ್ಕೆ ಮೌಲ್ಯಾಧಾರಿತ ವ್ಯವಸ್ಥೆಯೇ ಕಾರಣ. ಮಾನವೀಯ ಮೌಲ್ಯಗಳು, ಒಗ್ಗಟ್ಟು, ಕಾಸಿಗೆ ಬೆಲೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಬಿಡದ ನಿರಂತರ ಪಟ್ಟು- ಈ ನಾಲ್ಕು ಮಂತ್ರಗಳೇ ವಿಪ್ರೋವನ್ನು ಔನ್ನತ್ಯಕ್ಕೆ ಏರಿಸಿವೆ ಎಂದು ಮಾರ್ಮಿಕವಾಗಿ ಹೇಳಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications