ಯುದ್ಧಕಾಲ : ರಾಜ್ಯದಲ್ಲಿರುವ ವಿದೇಶಿಯರಿಗೆ ಭದ್ರತೆ
ಬೆಂಗಳೂರು: ಇರಾಕ್ ಮೇಲೆ ಅಮೆರಿಕ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ರಕ್ಷಣೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ರೈಲ್ವೇ ನಿಲ್ದಾಣ, ಕೇಂದ್ರ, ರಾಜ್ಯ ಸರಕಾರಿ ಹಾಗೂ ವಿದೇಶಿ ಸಂಸ್ಥೆಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ . ಗೃಹ ಕಾರ್ಯದರ್ಶಿ, ಸಾರಿಗೆ ಕಮಿಶನರ್, ಡಿಜಿಪಿ, ಪೊಲೀಸ್ಮಿಶನರ್ ಸೇರಿದಂತೆ ಭದ್ರತಾ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಬುಧವಾರ ವಿಧಾನ ಮಂಡಲದಲ್ಲಿ ತಿಳಿಸಿದರು.
ಚೆನ್ನೈನಲ್ಲಿರುವ ಬ್ರಿಟನ್ ರಾಯಭಾರ ಕಚೇರಿಯು ಕರ್ನಾಟಕದಲ್ಲಿರುವ ತನ್ನ ನೌಕರರಿಗೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದೆ. ರಾಜ್ಯದಲ್ಲಿರುವ ಅಮೆರಿಕನ್, ಬ್ರಿಟನ್, ಇರಾಕ್, ಜಪಾನ್, ಸ್ಪೇನ್ ಮೂಲದ ನಿವಾಸಿಗಳಿಗೆ ಎಲ್ಲ ರೀತಿಯ ರಕ್ಷಣೆ ಒದಗಿಸಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಆದೇಶಿಸಲಾಗಿದೆ. ಅಲ್ಲದೆ ಯುದ್ಧ ಸಂದರ್ಭದಲ್ಲಿ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲೂ ಸೂಚಿಸಲಾಗಿದೆ.
ಯುದ್ಧ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ, ಔಷಧ ಮತ್ತಿತರ ಅಗತ್ಯ ವಸ್ತುಗಳ ಕೃತಕ ಅಭಾವ ಪರಿಸ್ಥಿತಿ ತಡೆಗೆ ಎಸ್ಮಾ ಜಾರಿ ಮಾಡಲಾಗಿದೆ. ಕೃತಕ ಅಭಾವ ಸೃಷ್ಟಿಸುವವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖರ್ಗೆ ಎಂದು ಖರ್ಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...