ಬೆಂಗಳೂರಂದ್ರೆ ಹಂಗೇ.. ಏಷ್ಯಾದಲ್ಲೇ ಫಾಸ್ಟ್ !!
ಬೆಂಗಳೂರು : ಒಂದು ಕಾಲದಲ್ಲಿ ಬೆಂಗಳೂರಿಗೆ ನಿವೃತ್ತರ ಸ್ವರ್ಗ ಎಂಬ ಹೆಸರಿತ್ತು. ಬೆಂಗಳೂರೆಂದರೆ ಅಷ್ಟು ತಂಪು. ಕೂಲ್. ಆದರೆ ಈಗ ರೂಢಿ ಮಾತು ಹಾಗಿಲ್ಲ. ಬೆಂಗಳೂರು ಸಿಲಿಕಾನ್ ಸಿಟಿಯಾಗಿದೆ. ಪರಿಸರ ಪ್ರಿಯರ ಬಾಯಲ್ಲಿ ಗಾರ್ಡನ್ ಸಿಟಿ ಅಥವಾ ಉದ್ಯಾನಗಳ ನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಈಗೀಗ ಮಾಲಿನ್ಯ ನಗರಿ ಅಂತ ಬೈಯಿಸಿಕೊಳ್ಳುವುದೂ ಉಂಟು. ಬೆಂಗಳೂರೆಂದರೆ ಹಂಗೇ...ಏಷ್ಯಾ ಮ್ಯಾಪ್ನಲ್ಲೇ ಫಾಸ್ಟ್ .
ಬೆಂಗಳೂರು ನಡೆದು ಬಂದ ದಾರಿಯ ಬಗ್ಗೆ ಸುದೀರ್ಘ ರಾಷ್ಟ್ರಮಟ್ಟದ ವಿಚಾರ ಸಂಕಿರಣವೊಂದನ್ನು ಮಾರ್ಚ್ 21 ಮತ್ತು 22ರಂದು ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣದಲ್ಲಿ ವಿಪರೀತ ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಬಗ್ಗೆ, ತಂತ್ರಜ್ಞಾನದ ಪರಿಣಾಮ, ಜೈವಿಕ ಸಮತೋಲನದ ಇತಿಹಾಸ ಹಾಗೂ ಬೆಂಗಳೂರಿನಲ್ಲಿರುವ ಸಮುದಾಯಗಳು ಮತ್ತು ಶಿಕ್ಷಣದ ಬಗ್ಗೆ ಅಧ್ಯಯನಕಾರರು ವಿವಿಧ ಅಧ್ಯಯನವರದಿಗಳನ್ನು ಮಂಡಿಸಲಿದ್ದಾರೆ. ಎರಡು ದಿನಗಳ ಅವಧಿಯಲ್ಲಿ ಬೆಂಗಳೂರು ಕುರಿತಂತೆ ಒಟ್ಟು 22 ವರದಿಗಳನ್ನು ಮಂಡಿಸಲಾಗುವುದು.
ಈ ಸಂಕಿರಣದಲ್ಲಿ ತಂತ್ರಜ್ಞಾನ ಮತ್ತು ಚರಿತ್ರೆ ಅಧ್ಯಯನಕಾರರ ಸಮಿತಿಯು ಭಾಗವಹಿಸಲಿದೆ. ಐಎಸ್ಇಎಸ್, ಐಐಎಮ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್, ಹೈದರಬಾದ್ ಮತ್ತು ಗುಲ್ಬರ್ಗ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು, ನಿಮ್ಹಾನ್ಸ್, ಐಸಿಎಚ್ಆರ್, ಐಐಐಟಿಬಿ, ಮಿಥಿಕ್ ಸೊಸಾಯಿಟಿ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳ ಅಧ್ಯಯನಕಾರರು ಭಾಗವಹಿಸುವರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...