ಪೊನ್ನಾಚಿ ಅರಣ್ಯಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ
ಬೆಂಗಳೂರು : ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ ನರಹಂತಕ ವೀರಪ್ಪನ್ ಬೀಡು ಬಿಟ್ಟಿದ್ದಾನೆಂಬ ವರ್ತಮಾನಗಳ ಹಿನ್ನೆಲೆಯಲ್ಲಿ ಕರ್ನಾಟಕ ವಿಶೇಷ ಪೊಲೀಸ್ ಪಡೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಕರ್ನಾಟಕ ಹಾಗೂ ತಮಿಳುನಾಡು ಗಡಿ ಪ್ರದೇಶವಾದ ಪೊನ್ನಾಚಿ ಅರಣ್ಯಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಕರ್ನಾಟಕ ಎಸ್ಟಿಎಫ್ ಪಡೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಎಸ್ಟಿಎಫ್ ಮುಖ್ಯಸ್ಥರಾದ ಜ್ಯೋತಿಪ್ರಕಾಶ್ ಮಿರ್ಜಿ ಅವರು ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವೀರಪ್ಪನ್ನಿಂದ ಅಪಹರಣಕ್ಕೊಳಗಾಗಿ ಕಾಡಿನಲ್ಲಿಯೇ ನಿಧನರಾದ ಮಾಜಿ ಸಚಿವ ಎಚ್.ನಾಗಪ್ಪನವರ ದುರಂತ ಅಂತ್ಯದ ನಂತರ ಕರ್ನಾಟಕ ಹಾಗೂ ತಮಿಳುನಾಡು ಎಸ್ಟಿಎಫ್ ಪಡೆಗಳು ವೀರಪ್ಪನ್ ಶಿಕಾರಿಯನ್ನು ಚುರುಕುಗೊಳಿಸಿವೆ.
ವೀರಪ್ಪನ್ ಬಗ್ಗೆ ಸುಳಿವು ನೀಡುವಂತೆ ಕಾಡಿನಂಚಿನ ಗ್ರಾಮಸ್ಥರ ಮನವೊಲಿಸುವ ಕಾರ್ಯದಲ್ಲೂ ಪೊಲೀಸರು ತೊಡಗಿದ್ದಾರೆ. ವೀರಪ್ಪನ್ ಹಿಡಿಯಲು ಸಹಕಾರ ನೀಡಿದವರಿಗೆ 5 ಕೋಟಿ ರುಪಾಯಿ ಬಹುಮಾನ ನೀಡುವ ಭಿತ್ತಿಪತ್ರಗಳು ಕಾಡಿನಂಚಿನ ಗ್ರಾಮಗಳ ಓಣಿಓಣಿಗಳಲ್ಲೂ ಕಾಣಿಸುತ್ತಿವೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ