‘10 ಕೋಟಿ ಏನಾಯ್ತಂತ ಮಣೀನಾ ವೀರಪ್ಪನ್ ಕೇಳ್ಬೇಕು ಅಂತಿದ್ದ’
ಚಾಮರಾಜನಗರ : ‘ಕೊಳತ್ತೂರು ಮಣಿಗೆ ವೀರಪ್ಪನ್ 10 ಕೋಟಿ ರುಪಾಯಿ ಕೊಟ್ಟಿದ್ದ. ಅದೇನಾಯಿತು ಅಂತ ಕೇಳೋಕೆ ಆತನೇ ಸಂಧಾನಕಾರನಾಗಬೇಕೆಂದು ಪಟ್ಟು ಹಿಡಿದಿದ್ದ’- ಪುಟ್ಟಸ್ವಾಮಿ.
ಸಂಯುಕ್ತ ಜನತಾ ದಳಕ್ಕೆ ಸೇರಿದ ಪುಟ್ಟಸ್ವಾಮಿ ಮರಾಠಾಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ. ನಾಗಪ್ಪನವರ ಅಪಹರಣವಾಗಿದ್ದಾಗ, ಅವರ ಬಿಡುಗಡೆ ಬಗ್ಗೆ ಮಾತಾಡಲು ಸರ್ಕಾರಿ ದೂತ ಪೊನ್ನಾಚಿ ಮಹದೇವಸ್ವಾಮಿ ಜೊತೆ ಪುಟ್ಟಸ್ವಾಮಿ ಎರಡು ಬಾರಿ ಕಾಡಿಗೆ ಹೋಗಿದ್ದರು. ವೀರಪ್ಪನ್ ಜೊತೆ ಖುದ್ದು ಮಾತಾಡಿದ್ದರು. ಹಾಗಂತ ಅವರೇ ರೀಡಿಫ್ ಡಾಟ್ ಕಾಂಗೆ ಹೇಳಿಕೊಂಡಿದ್ದಾರೆ.
ಪುಟ್ಟಸ್ವಾಮಿ ಮಾತಾಡ್ತಿದಾರೆ, ಕೇಳಿಸಿಕೊಳ್ಳಿ-ನಾಗಪ್ಪನವರನ್ನು ಅಪಹರಿಸಿದ ನಂತರ ಕದುಂಬರ್ ಕಾಡಲ್ಲಿ ವೀರಪ್ಪನ್ ಸುಮಾರು ಒಂದು ತಿಂಗಳಿದ್ದ. ನಾನು ಹಾಗೂ ಪೊನ್ನಾಚಿ ಕಾಡಿಗೆ ಹೋಗಿ, ಆತನನ್ನು ಕಂಡೆವು. ಆಗ ವೀರಪ್ಪನ್ ಹೇಳಿದ- ‘ಎಸ್ಟಿಎಫ್ ಕಾರ್ಯಾಚರಣೆಯಲ್ಲಿ ಸಂತ್ರಸ್ತರಾದ ಜನರಿಗೆ ಹಂಚುವಂತೆ ಮಣಿಗೆ 10 ಕೋಟಿ ರುಪಾಯಿ ಕೊಟ್ಟಿದ್ದೆ. ಅದೇನಾಯಿತು ಅಂತ ಅವನನ್ನು ಕೇಳಬೇಕು. ಅದಕ್ಕೇ ಅವನೇ ಕಾಡಿಗೆ ಬರಲಿ ಅಂತ ಪಟ್ಟು ಹಿಡಿದಿದ್ದೀನಿ.’ ವೀರಪ್ಪನ್ ಹೀಗೆ ಪಟ್ಟು ಹಿಡಿದಿದ್ದಕ್ಕೆ, ಮಣಿ ಕೂಡ ಕೆಸೆಟ್ಟಿನ ಮೂಲಕ ಪ್ರತಿಕ್ರಿಯೆ ಕೊಟ್ಟರು. ಆ ಹಣವನ್ನೆಲ್ಲಾ ಆಗ ಎಸ್ಟಿಎಫ್ ಮುಖ್ಯಸ್ಥರಾಗಿದ್ದ ಐಜಿಪಿ ಕೆಂಪಯ್ಯ ಇಸಿದುಕೊಂಡರು ಅಂತ ಮಣಿ ಹೇಳಿದರು. ಆದರೆ ವೀರಪ್ಪನ್ಗೆ ನಂಬಿಕೆ ಬರಲಿಲ್ಲ. ಹೇಗೆ ಕಿತ್ತುಕೊಂಡರು ಅಂತ ವಿವರಣೆ ಕೇಳಿದ.
ಒಂದು ಸಲ ಮಣಿ ಜೊತೆ ಕೂತು ಆ 10 ಕೋಟಿ ರುಪಾಯಿ ಬಗ್ಗೆ ಮಾತಾಡಿದ ನಂತರ ನಾಗಪ್ಪನವರನ್ನು ಬಿಡುವುದಾಗಿ ವೀರಪ್ಪನ್ ಹೇಳಿದ. ಆದರೆ, ಮಣಿ ಬಿಡುಗಡೆ ವಿಳಂಬವಾಯಿತು. ಅಷ್ಟರಲ್ಲಿ ನಾಗಪ್ಪನವರ ಹತ್ಯೆಯಾಯಿತು.
ವೀರಪ್ಪನ್ ಪಡೆಯಲ್ಲೀಗ ಇರುವುದು ಐದೇ ಜನ. ಅವನ ಬಲಗೈ ಬಂಟ ಸೇತುಕುಳಿಯನ್ನು ನಾನು ಗುರುತಿಸಬಲ್ಲೆ. ಇನ್ನೊಬ್ಬನ ಹೆಸರು ಚಂದ್ರ ಗೌಂಡರ್. ಚಂದ್ರ ಮಿಲಿಟರಿ ಬಟ್ಟೆ ಹಾಕಿದ್ದ. ತನ್ನ ಜೊತೆ ಸದಾ ಇರುವವರಿಗೆ ವೀರಪ್ಪನ್ ಈ ರೀತಿಯ ಬಟ್ಟೆ ಕೊಡ್ತಾನೆ. ಇನ್ನೊಬ್ಬನ ಹೆಸರು ಭಾಗ್ಯ. ಪಾಕ್ಯ ಅಂತಲೂ ಕರೆಯುತ್ತಾರೆ. ಅವನು ಸಿವಿಲ್ ಬಟ್ಟೆ ಹಾಕಿದ್ದ. ವೀರಪ್ಪನ್ ಮತ್ತು ಸೇತುಕುಳಿ ಗೋವಿಂದನ್ ಹತ್ತಿರ ಎಕೆ- 47 ಬಂದೂಕುಗಳಿದ್ದವು. ಚಂದ್ರ ಗೌಂಡರ್ ಬಳಿ ಎಸ್ಎಲ್ಆರ್ ಇತ್ತು. ಅವರ ಹತ್ತಿರ ಮೂರೋ ನಾಲ್ಕೋ ನಾಡ ಬಂದೂಕುಗಳೂ ಇದ್ದವು.
ಎಸ್ಟಿಎಫ್ ಕಾರ್ಯಾಚರಣೆ ವೇಳೆ ನಾಗಪ್ಪನವರು ಅಕಸ್ಮಾತ್ತಾಗಿ ಸತ್ತಿದ್ದಾರೆ ಅಂತ ನನಗನ್ನಿಸುತ್ತದೆ. ವೀರಪ್ಪನ್ ಸುಖಾ ಸುಮ್ಮನೆ ಅವರನ್ನು ಕೊಲ್ಲುತ್ತಿರಲಿಲ್ಲ .
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications