ವಕೀಲರ ಬಂದ್ ಯಶಸ್ವಿ, ಕೋರ್ಟ್ ಕಲಾಪ ಅಸ್ತವ್ಯಸ್ತ
ಬೆಂಗಳೂರು : ವಿವಿಧ ವಕೀಲರ ಸಂಘಗಳು ಕರೆ ನೀಡಿದ್ದ ಒಂದು ದಿನದ (ಡಿ.18, ಬುಧವಾರ) ರಾಷ್ಟ್ರವ್ಯಾಪಿ ಬಂದ್ಗೆ ಕರ್ನಾಟಕದಲ್ಲಿ ಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು - ರಾಜ್ಯದ ಎಲ್ಲ ನ್ಯಾಯಾಲಯಗಳ ವಕೀಲರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಕೋರ್ಟ್ ವ್ಯವಹಾರಗಳು ಅಸ್ತವ್ಯಸ್ತಗೊಂಡವು.
ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ (Legal Services Authorities Act)ಗೆ ತಿದ್ದುಪಡಿ ವಿರೋಧಿಸಿ ವಿವಿಧ ವಕೀಲರ ಸಂಘಗಳು ಬುಧವಾರದ ಬಂದ್ಗೆ ಕರೆ ನೀಡಿದ್ದವು. ನ್ಯಾಯವಾದಿಗಳಿಗೆ ಮುಷ್ಕರ ನಡೆಸುವ ಹಕ್ಕಿಲ್ಲ ಎಂದು ಈ ಬಂದನ್ನು ಸುಪ್ರಿಂಕೋರ್ಟ್ ಬಹಿಷ್ಕರಿಸಿದ್ದರೂ, ದೇಶಾದ್ಯಂತ ವಕೀಲರ ಮುಷ್ಕರ ನಡೆದಿದೆ.
ಬೆಂಗಳೂರಿನಲ್ಲಿನ ವಕೀಲರು ಹೈಕೋರ್ಟ್ ಹಾಗೂ ಸಿವಿಲ್ ಕೋರ್ಟ್ಗಳ ಕಲಾಪಗಳನ್ನು ಬಹಿಷ್ಕರಿಸಿದ್ದವು. ರಾಜ್ಯದಲ್ಲಿ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದೆ ಎಂದು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ನ ವಕ್ತಾರರು ತಿಳಿಸಿದ್ದಾರೆ. ರಾಜ್ಯ ಬಾರ್ ಕೌನ್ಸಿಲ್ 42 ಸಾವಿರ ಸದಸ್ಯರನ್ನು ಹೊಂದಿದೆ.
12 ಸಾವಿರ ಸದಸ್ಯರನ್ನು ಹೊಂದಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಅವರು- ಬೆಂಗಳೂರಿನಲ್ಲಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ವಕೀಲರ ನ್ಯಾಯಾಲಯ ಕಲಾಪ ಬಹಿಷ್ಕಾರದಿಂದಾಗಿ ಬುಧವಾರ ಕೋರ್ಟ್ ವ್ಯವಹಾರಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಅಸ್ತವ್ಯಸ್ತಗೊಂಡಿವೆ ಎಂದು ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಆರ್.ಹೆಗಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications