ದಿನಕರ್ ವಿರುದ್ಧ ಎಸ್ಸೆಂ.ಕೃಷ್ಣ ಅಳಿಯ ಕೋರ್ಟ್ಗೆ
ನವದೆಹಲಿ : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ಮಾಜಿ ಪೊಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಮಾನಹಾನಿ ದಾವೆ ಹೂಡಿದ್ದಾರೆ.
‘ರಾಜ್ ಬಿಡುಗಡೆಗಾಗಿ ವೀರಪ್ಪನ್ಗೆ 20 ಕೋಟಿ ರುಪಾಯಿ ಕಪ್ಪ ಒಪ್ಪಿಸಲಾಗಿದೆ. ವೀರಪ್ಪನ್ಗೆ ಕಪ್ಪ ನೀಡಲು ಮುಖ್ಯಮಂತ್ರಿಗಳ ಅಳಿಯ ಸಿದ್ಧಾರ್ಥ ಎನ್ನುವವರು ಎರಡು ಬಾರಿ ತಲಾ 5 ಕೋಟಿ ರುಪಾಯಿಗಳನ್ನು ರವಾನಿಸಿದ್ದಾರೆ’ ಎಂದು ‘ವೀರಪ್ಪನ್ಸ್ ಪ್ರೆೃಜ್ ಕ್ಯಾಚ್ : ರಾಜ್ಕುಮಾರ್’ ಪುಸ್ತಕದಲ್ಲಿ ದಿನಕರ್ ಆರೋಪಿಸಿರುವುದನ್ನು ವಿರೋಧಿಸಿ ಸಿದ್ಧಾರ್ಥ ಅವರು ನ್ಯಾಯಾಲಯದ ಕಟ್ಟೆ ಹತ್ತಿದ್ದಾರೆ.
ದಿನಕರ್ ಅವರ ಪುಸ್ತಕದ ಪ್ರಕಟಣೆ, ಮಾರಾಟ ಹಾಗೂ ವಿತರಣೆಯನ್ನು ನಿಷೇಧಿಸಬೇಕು ಹಾಗೂ ಮಾನ ನಷ್ಟವಾಗಿದ್ದಕ್ಕಾಗಿ ತಮಗೆ 50 ಲಕ್ಷ ರುಪಾಯಿಗಳ ಪರಿಹಾರವನ್ನು ಕೊಡಿಸಬೇಕು ಎಂದು ಸಿದ್ಧಾರ್ಥ ನ್ಯಾಯಾಲಯವನ್ನು ಕೋರಿದ್ದಾರೆ.
ಸಿದ್ಧಾರ್ಥ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ- ಪ್ರತಿವಾದಿಗಳಾದ ದಿನಕರ್ ಹಾಗೂ ಪುಸ್ತಕವನ್ನು ಪ್ರಕಟಿಸಿದ ಕೊನಾರ್ಕ್ ಪಬ್ಲಿಷರ್ಸ್ಗೆ ನೊಟೀಸು ಜಾರಿಗೊಳಿಸಿ, ಮುಂದನ ವಿಚಾರಣೆಯನ್ನು 2003 ರ ಜನವರಿ 27 ಕ್ಕೆ ಗೊತ್ತು ಪಡಿಸಿದೆ.
ಎಷ್ಟು ಮೊಕದ್ದಮೆ ಬೇಕಾದರೂ ಹೂಡಲಿ-ದಿನಕರ್
ಭಯ ಎಂಬುದು ತಮ್ಮ ಡಿಕ್ಷನರಿಯಲ್ಲೇ ಇಲ್ಲ ಎಂದು ಮುಖ್ಯಮಂತ್ರಿಗಳ ಅಳಿಯ ಸಿದ್ಧಾರ್ಥ ಅವರು ತಮ್ಮ ವಿರುದ್ಧ ಹೂಡಿರುವ ಮೊಕದ್ದಮೆಯ ಕುರಿತು ದಿನಕರ್ ಪ್ರತಿಕ್ರಿಯಿಸಿದ್ದಾರೆ. ಆತ ಎಷ್ಟು ಮೊಕದ್ದಮೆಗಳನ್ನು ಬೇಕಾದರೂ ಹೂಡಲಿ. ಅವುಗಳನ್ನು ಎದುರಿಸುವುದು ಹೇಗೆಂದು ತಮಗೆ ಗೊತ್ತು ಎಂದು ದಿನಕರ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ