ವಾಜಪೇಯಿ ಬಳಿ ಸಂಕಟ ತೋಡಿಕೊಂಡ ಪರಿಮಳ
ನವದೆಹಲಿ : ಮಾಜಿ ಸಚಿವ ನಾಗಪ್ಪ ಅವರನ್ನು ವೀರಪ್ಪನ್ ಸೆರೆಯಿಂದ ಬಿಡಿಸಲು ರಾಜ್ಯ ಸರ್ಕಾರ ಕೈಗೊಂಡ ಎಲ್ಲ ಪ್ರಯತ್ನಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಪ್ರಧಾನಿ ವಾಜಪೇಯಿ ಅವರನ್ನು ಪರಿಮಳ ನಾಗಪ್ಪ ಆಗ್ರಹಿಸಿದ್ದಾರೆ.
ತಮ್ಮ ಕುಟುಂಬದ ಸದಸ್ಯರೊಂದಿಗೆ ದೆಹಲಿ ಯಾತ್ರೆ ಕೈಗೊಂಡಿರುವ ಪರಿಮಳಾ ನಾಗಪ್ಪ ಮಂಗಳವಾರ (ನ.12) ವಾಜಪೇಯಿ ಅವರನ್ನು ಭೇಟಿ ಮಾಡಿದರು. ತಮ್ಮ ಪತಿಯ ಬಿಡುಗಡೆ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು , ಬಿಡುಗಡೆ ಸಂಬಂಧ ವಾಜಪೇಯಿ ಅವರು ವೈಯಕ್ತಿಕ ಕಾಳಜಿ ವಹಿಸುವಂತೆ ಭೇಟಿಯ ಸಂದರ್ಭದಲ್ಲಿ ಪರಿಮಳ ಮನವಿ ಮಾಡಿದರು ಎಂದು ದೆಹಲಿ ಮೂಲಗಳು ತಿಳಿಸಿವೆ.
ನಾಗಪ್ಪ ಅವರ ಬಿಡುಗಡೆ ಕುರಿತು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿಲ್ಲ . ಇನ್ನು ಮುಂದೆ ರಾಜ್ಯ ಸರ್ಕಾರವನ್ನು ಅವಲಂಬಿಸಲು ಸಾಧ್ಯವಿಲ್ಲ ವಾದ್ದರಿಂದ ಪ್ರಧಾನಿಯವರು ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಪರಿಮಳ ಒತ್ತಾಯಿಸಿದರು. ಮನವಿಯನ್ನು ಆಲಿಸಿದ ಪ್ರಧಾನಿ ವಾಜಪೇಯಿ ಅವರು ಪರಿಮಳ ನಾಗಪ್ಪ ಅವರಿಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿ, ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.
ಸಂಯುಕ್ತ ದಳ ಕಾರ್ಯಕರ್ತರ ಧರಣಿ
ಕಾಡುಗಳ್ಳ ವೀರಪ್ಪನ್ ಸೆರೆಯಿಂದ ಮಾಜಿ ಸಚಿವ ನಾಗಪ್ಪ ಅವರ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯತಂತ್ರವಾಗಿ ಸಂಯುಕ್ತ ಜನತಾದಳ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರು ಮಂಗಳವಾರ ವಿಧಾನಸೌಧ ಮತ್ತು ರಾಜ್ಯ ಸಚಿವಾಲಯದ ಮುಂಭಾಗ ಧರಣಿ ನಡೆಸಿದರು.
ಬಿಜೆಪಿಯ ಜಗದೀಶ್ ಶೆಟ್ಟರ್, ಸಂಯುಕ್ತ ಜನತಾದಳದ ಸಿ.ಭೈರೇಗೌಡ, ಬಿ.ಸೋಮಶೇಖರ್, ಮಾಜಿ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಮ್ತತಿತರರು ಧರಣಿಯಲ್ಲಿ ಭಾಗವಹಿಸಿದ್ದರು. ಈ ಮುನ್ನ ಧರಣಿಯಲ್ಲಿ ಭಾಗಿಯಾಗುವುದಾಗಿ ಪ್ರಕಟಿಸಿದ್ದ ಜಾತ್ಯತೀತ ಜನತಾದಳ ಧರಣಿಯಲ್ಲಿ ಭಾಗವಹಿಸಿರಲಿಲ್ಲ .
(ಏಜೆನ್ಸೀಸ್)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications