ಅನಂತಮೂರ್ತಿ ಉಚಿತ ಸಲಹೆಗೆ ಪೇಜಾವರ ಶ್ರೀಗಳ ಅಸಮಾಧಾನ
ಶಿರಸಿ : ಜ್ಞಾನಪೀಠಿಗ ಯು.ಆರ್.ಅನಂತಮೂರ್ತಿಯಂಥ ಬುದ್ಧಿಜೀವಿಗಳು ನಮಗೆ ಸಲಹೆ ಮಾಡುವುದನ್ನು ಬಿಟ್ಟು ಮುಸ್ಲಿಂ ಧರ್ಮಗುರುಗಳಿಗೆ ಹಾಗೂ ಮುಸ್ಲಿಂ ಜನತೆಗೆ ಬುದ್ಧಿ ಹೇಳಲು ಮುಂದಾಗಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬುದ್ಧಿ ಜೀವಿಗಳು ಎನ್ನಿಸಿಕೊಂಡವರು ಹಿಂದೂ ಅಥವಾ ಮುಸ್ಲಿಂ ಎನ್ನುವುದನ್ನು ಪರಿಗಣಿಸದೆ ವಿಷಯದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸಲಹೆ ನೀಡಬೇಕು. ಇದನ್ನು ಬಿಟ್ಟು ಕೋಟ್ಯಂತರ ಹಿಂದುಗಳ ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಉಚಿತ ಸಲಹೆ ನೀಡಬಾರದು ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದರು. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಶಿರಸಿಗೆ ಆಗಮಿಸಿದ್ದರು.
ಉದ್ದೇಶಿತ ಜಾಗದಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದನ್ನು ಪುನರುಚ್ಚರಿಸಿದ ವಿಶ್ವೇಶ ತೀರ್ಥರು- ಬುದ್ಧಿಜೀವಿಗಳು ಉಭಯ ಬಣಗಳವರಿಗೂ ಸಲಹೆ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ತಾವು ಜವಾಬ್ದಾರರಲ್ಲ ಎಂದು ಎಚ್ಚರಿಸಿದರು.
ಹಿಂಸೆಯಿಂದ ಮಂದಿರ ನಿರ್ಮಾಣವಾಗಬೇಕು ಎನ್ನುವುದು ತಮ್ಮ ಅಪೇಕ್ಷೆಯಲ್ಲ . ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಿದೆ. ಮಂದಿರ ನಿರ್ಮಾಣದಲ್ಲಿ ಕೂಡ ಇಂಥ ಪರಿಸ್ಥಿತಿ ಮತ್ತೆ ಬರಬಹುದು ಎಂದ ಸ್ವಾಮೀಜಿ- ರಾಮ ಮಂದಿರ ಆಂದೋಲನವನ್ನು ಸ್ವಾತಂತ್ರ್ಯ ಚಳವಳಿಗೆ ಹೋಲಿಸಿದರು. ನ್ಯಾಯಾಲಯದ ತೀರ್ಪು ಎಲ್ಲರಿಗೂ ಒಪ್ಪಿಗೆಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟ ಅವರು- ಹಿಂದೂ ಮುಸ್ಲಿಂ ಮುಖಂಡರು ಒಟ್ಟಿಗೆ ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...