ಬಾಲಯೋಗಿ ಸ್ಮರಣೆ: ರಾಜ್ಯ ಬಜೆಟ್ಅಧಿವೇಶನದ ಮೊದಲ ದಿನ ಮುಕ್ತಾಯ
ಬೆಂಗಳೂರು : ಹೆಲಿಕ್ಯಾಫ್ಟರ್ ಅಪಘಾತದಲ್ಲಿ ಇತ್ತೀಚೆಗೆ ದುರ್ಮರಣ ಹೊಂದಿದ ಲೋಕಸಭಾಧ್ಯಕ್ಷ ಜಿಎಂಸಿ ಬಾಲಯೋಗಿ ಅವರಿಗೆ ಸೋಮವಾರ ಪ್ರಾರಂಭವಾದ ಕರ್ನಾಟಕ ವಿಧಾನಮಂಡಲ ಶ್ರದ್ಧಾಂಜಲಿ ಸಲ್ಲಿಸಿತು. ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಸಂಸತ್ ಕಾರ್ಯ ಕಲಾಪಗಳನ್ನು ನೆರವೇರಿಸುವಲ್ಲಿ ಬಾಲಯೋಗಿ ಅವರು ತೋರುತ್ತಿದ್ದ ಶಿಸ್ತು ಹಾಗೂ ನೀತಿಗಳ ಕುರಿತು ವಿಧಾನಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಹಾಗೂ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೆನಪು ಮಾಡಿಕೊಂಡರು. ವಿರೋಧಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ಸಂಯುಕ್ತ ದಳದ ಪಿಜಿಆರ್ ಸಿಂಧ್ಯಾ ಅವರು ಸಂಸತ್ತಿನ ಕ್ಲಿಷ್ಟ ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸುತ್ತಿದ್ದ ಬಾಲಯೋಗಿ ಅವರ ಮುತ್ಸದ್ಧಿತನವನ್ನು ಶ್ಲಾಘಿಸಿದರು.
ವಿಧಾನ ಪರಿಷತ್ತಿನಲ್ಲಿ ಸಭಾಪತಿ ಬಿ.ಎಲ್.ಶಂಕರ್ ಶ್ರದ್ಧಾಂಜಲಿ ಸಲ್ಲಿಸಿದರು. ಬಾಲಯೋಗಿ ಅವರನ್ನು ಜನ ನಾಯಕ ಎಂದು ಬೃಹತ್ ನೀರಾವರಿ ಸಚಿವ ಎಚ್.ಕೆ.ಪಾಟೀಲ್ ಬಣ್ಣಿಸಿದರೆ, ಜೆಡಿಯುನ ಕೆ.ಎಚ್.ಶ್ರೀನಿವಾಸ್ ದಲಿತ ನಾಯಕ ಎಂದು ಬಣ್ಣಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...