ಗುಲ್ಬರ್ಗದಲ್ಲಿ ನಡೆಯಲಿರುವ ಹುತಾತ್ಮರ ದಿನಾಚರಣೆಗೆ ಸುಷ್ಮಾ ಸ್ವರಾಜ್
ಗುಲ್ಬರ್ಗ: ರಾಜ್ಯ ಹಿಂದಿ ಪ್ರಚಾರ ಸಭೆ, ಮಾರ್ಚ್ 23ರಂದು ಹುತಾತ್ಮರ ದಿನವನ್ನು ಆಚರಿಸಲಿದ್ದು, ಕಾರ್ಯಕ್ರಮ ಉದ್ಘಾಟನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸಲಿದ್ದಾರೆ.
ರಾಜ್ಯ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಈ ವಿಷಯವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 1931ರ ಮಾರ್ಚ್ 23ರಂದು ಬ್ರಿಟಿಷರು ಗಲ್ಲು ಶಿಕ್ಷೆ ನೀಡಿ ಸಾಯಿಸಿದ ಸಾಹಿದ್ ಭಗತ್ಸಿಂಗ್ , ಸುಖದೇವ್ ಮತ್ತು ರಾಜಗುರು ಅವರ ಪುಣ್ಯತಿಥಿಯನ್ನು ಹುತಾತ್ಮರ ದಿನವನ್ನಾಗಿ ಹಿಂದಿ ಪ್ರಚಾರ ಸಭೆಯು ಪ್ರತಿ ವರ್ಷ ಆಚರಿಸುತ್ತಿದೆ.
ಹಿಂದಿ ಪ್ರಚಾರ ಸಭೆಯ ಕಾರ್ಯಚಟುವಟಿಕೆಗಳ ಬಗೆಗೆ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಕೆಲವು ಮಂದಿ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಸಾಕ್ಷ್ಯ ಚಿತ್ರ ತೆಗೆಯಲು ನಿರ್ಧರಿಸಿದೆ. ಈ ಚಿತ್ರದ ಮೂಹೂರ್ತವನ್ನೂ ಸುಷ್ಮಾ ಅವರು ಮಾಡುವರು. ಅಬ್ದುಲ್ ಹಕೀಮ್ ಸದಾರ್ ಅವರು ಈ ಚಿತ್ರವನ್ನು ನಿರ್ದೇಶಿಸುವರು. ಮಾರ್ಚ್ 23ರಂದೇ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸಮಾವೇಶವೂ ನಡೆಯಲಿದ್ದು ಸುಮಾರು 500 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...