ಕನ್ನಡ ನಾಮಫಲಕ ಬರೆಸದ ಅಂಗಡಿಗಳ ಪರವಾನಿಗಿ ರದ್ದತಿಗೆ ಆದೇಶ
ಬೆಂಗಳೂರು : ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕನ್ನಡ ನಾಮ ಫಲಕ ಬರೆಸದ ಅಂಗಡಿ ಮುಂಗಟ್ಟುಗಳ ಪರವಾನಿಗಿಯನ್ನು ರದ್ದುಪಡಿಸುವುದಾಗಿ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಗರ - ಪಟ್ಟಣ ಕನ್ನಡೀಕರಣ ಯೋಜನೆಯ ಅಂಗವಾಗಿ ಸರಕಾರ ಈ ಸುತ್ತೋಲೆ ಹೊರಡಿಸಿದೆ. ಕನ್ನಡ ನಾಮಫಲಕವಿಲ್ಲದ ಅಂಗಡಿ ಮುಂಗಟ್ಟುಗಳ ಪರವಾನಿಗಿಯನ್ನು ರದ್ದುಮಾಡುವ ಅಧಿಕಾರವನ್ನು ಆಯಾಯ ಪುರಸಭೆಗಳಿಗೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ರಸ್ತೆಗಳು, ಬಡಾವಣೆಗಳು, ವೃತ್ತಗಳು ಮತ್ತು ಉದ್ಯಾನವನಗಳಿಗೆ ಕನ್ನಡದ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ಥಳೀಯ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನಿಡಬೇಕು. ಅಲ್ಲದೆ ಅಗತ್ಯವಿರುವ ಕಡೆ ಹಿಂದಿನ ಹೆಸರಗಳನ್ನು ಬದಲಾಯಿಸಿ ಕನ್ನಡ ನಾಡಿನ ಮಹತ್ವದ, ಮೌಲ್ಯನಿಷ್ಠ ವ್ಯಕ್ತಿಗಳ ಹೆಸರನ್ನಿಡಬೇಕು. ಸೌಂದರ್ಯಕ್ಕೆ ಧಕ್ಕೆಯಾಗದಂತೆ, ಕನ್ನಡ ಪರ ಚಿಂತಕರ ಸೂಕ್ತಿಗಳ ಫಲಕಗಳನ್ನು ಉದ್ಯಾನಗಳಲ್ಲಿ ಅಳವಡಿಸಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...