ಅಯೋಧ್ಯೆಗೆ ಇನ್ನಷ್ಟು ಅರೆ ಮಿಲಿಟರಿ ಹಾಗೂ ಮೀಸಲು ಪೊಲೀಸ್ ಪಡೆ
ಲಖನೌ : ಅಯೋಧ್ಯೆಯಲ್ಲಿ ಸಾಂಕೇತಿಕ ಪೂಜೆ ನಿಷೇಧಿಸಿ ಸುಪ್ರಿಂಕೋರ್ಟ್ ತೀರ್ಪಿತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಸಂಘಟನೆ ಸಂಭವಿಸುವ ಆತಂಕವಿರುವುದರಿಂದ ಹೆಚ್ಚುವರಿ ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.
ಸುಪ್ರಿಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಇನ್ನೂ 13 ಅರೆ ಮಿಲಿಟರಿ ರಕ್ಷಣಾ ತಂಡಗಳನ್ನ್ನು ಉತ್ತರ ಪ್ರದೇಶ ಸರ್ಕಾರ ದೇವಾಲಯ ನಗರಿಗೆ ಕಳುಹಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 10 ಹೆಚ್ಚುವರಿ ತುಕಡಿಗಳೂ ಇಲ್ಲಿ ಬೀಡು ಬಿಡಲಿವೆ.
ಮುಸ್ಲಿಂ ನಾಯಕರಿಗೆ ಖುಷಿ : ಸಾಂಕೇತಿಕ ಪೂಜೆಯ ವಿಷಯದಲ್ಲಿ ಸುಪ್ರಿಂಕೋರ್ಟಿನ ತೀರ್ಮಾನವನ್ನು ಸ್ವಾಗತಿಸಿರುವ ಮುಸ್ಲಿಂ ಮುಖಂಡರು ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸಿದ್ದಾರೆ. ಜಾಮಾ ಮಸೀದಿಯ ಇಮಾಮ್ ಅಹ್ಮದ್ ಬುಖಾರಿ, ಇದು ಮೊದಲ ನ್ಯಾಯಿಕ ಜಯ ಎಂದಿದ್ದಾರೆ. ಚುಕ್ತಾ ಆಗಬೇಕಿರುವ ಅಯೋಧ್ಯೆ ವಿವಾದದ ಬಗೆಗಿನ ಇನ್ನಷ್ಟು ಪ್ರಕರಣಗಳನ್ನೂ ನ್ಯಾಯಾಲಯ ಬೇಗನೆ ಬಗೆಹರಿಸಲಿ ಎಂದಿರುವ ಬುಖಾರಿ, ನ್ಯಾಯಾಲಯದಲ್ಲಿ ಸರ್ಕಾರದ ಧೋರಣೆಯಿಂದ ಕೇಂದ್ರ ಸರ್ಕಾರವನ್ನು ನಡೆಸುತ್ತಿರುವುದು ಎನ್ಡಿಎ ಅಲ್ಲ ವಿಎಚ್ಪಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ದಾರೆ.
ಶಿಲಾದಾನ ನಿಲ್ಲದು : ಮಾರ್ಚ್ 15ರಂದು ಅಯೋಧ್ಯೆಯಲ್ಲಿ ಶಿಲಾದಾನ ನಡೆದೇ ತೀರುತ್ತದೆ ಎಂದಿರುವ ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ ರಾಮಚಂದ್ರ ದಾಸ್ ಪರಮಹಂಸ, ಯಾವುದೇ ಒತ್ತಡಗಳಿಗೂ ಮಣಿಯದೆ ಕೆಲಸ ಮುಂದುವರೆಸುವಂತೆ ಕರಸೇವಕರಿಗೆ ಕರೆ ನೀಡಿದ್ದಾರೆ. ಸುಪ್ರಿಂಕೋರ್ಟ್ ತೀರ್ಪಿನ ನಂತರವೂ ರಾಮ ಜನ್ಮ ಭೂಮಿ ನ್ಯಾಸ ತನ್ನ ಪಟ್ಟು ಸಡಿಲಿಸಿಲ್ಲ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...