ಕಾಳ್ಗಿಚ್ಚು ಭೀತಿ: ನಾಗರಹೊಳೆ-ಬಂಡೀಪುರ ರಾಷ್ಟ್ರೀಯ ಉದ್ಯಾನಗಳಿಗೆ ಬೀಗ
ಮೈಸೂರು: ಕಾಳ್ಗಿಚ್ಚು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾಗರಹೊಳೆಯ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ ಮಾರ್ಚ್ 4ರಿಂದ ಮುಚ್ಚಲಾಗುವುದು. ಬಂಡೀಪುರ ರಾಷ್ಟ್ರೀಯ ಉದ್ಯಾನವೂ ಮಾರ್ಚ್ 11ರಿಂದ ಮುಚ್ಚಲಿದೆ.
ಈ ಎರಡೂ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಬಹುದಾದ ಕಾಳ್ಗಿಚ್ಚಿನಿಂದ ಪ್ರಾಣಿ ಸಂಕುಲವನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ಕಾಳ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹುಣಸೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ ಮನವಿ ಮಾಡಿಕೊಂಡಿದ್ದಾರೆ.
ನಾರಹೊಳೆ ರಾಷ್ಟ್ರೀಯ ಉದ್ಯಾನವನ ಮಾರ್ಚ್ 15ರಂದು ಮತ್ತೆ ಪ್ರೇಕ್ಷಕರಿಗೆ ಬಾಗಿಲು ತೆರೆಯುವ ನಿರೀಕ್ಷೆಯಿದೆ. ಆದರೆ ಬಂಡೀಪುರ ಉದ್ಯಾನವನ ಮತ್ತೆ ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗಿಲ್ಲ. ಪರಿಸ್ಥಿತಿಯನ್ನು ನೋಡಿಕೊಂಡು ಉದ್ಯಾನವನದ ಬಾಗಿಲು ತೆರೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಣ್ಣಯ್ಯ ಅವರ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...