ಕಳ್ಳಭಟ್ಟಿಗೆ ಒಬ್ಬನ ಬಲಿ : ಕುಂಬಳಗೋಡಿನಲ್ಲಿ ಮತದಾನಕ್ಕೆ ಬಹಿಷ್ಕಾರ
ಬೆಂಗಳೂರು : ಕುಂಬಳಗೋಡು ಬಳಿಯ ಗಂಗಸಂದ್ರದ ಮತದಾರರು, ಕನಕಪುರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದಾರೆ. ಬುಧವಾರ ರಾತ್ರಿ ರಾಜಕೀಯ ಪಕ್ಷವೊಂದು ಹಂಚಿದ ಕಳ್ಳಭಟ್ಟಿ ಕುಡಿದು ವ್ಯಕ್ತಿಯಾಬ್ಬರು ಸಾವನ್ನಪ್ಪಿರುವುದರಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಯಾರಿಗೂ ಮತ ಹಾಕದಿರಲು ನಿರ್ಧರಿಸಿದ್ದಾರೆ.
ಕಳ್ಳಭಟ್ಟಿ ಸೇವಿಸಿದ ಇನ್ನೊಬ್ಬ ಯುವಕ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯೆ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಸರಾಸರಿ 40ರಷ್ಟು ಮತದಾನ ಆಗಿದೆ. ಬೂತ್ ಸಂಖ್ಯೆ 187ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಮತ ಚಲಾಯಿಸಲು ಬಂದಾಗ ಜನತಾದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ಕಾಂಗ್ರೆಸ್ನ ಒಬ್ಬ ಹಾಗೂ ದಳದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ನಕಲಿ ಮತದಾನ ಮಾಡಲು ಪ್ರಯತ್ನಿಸಿದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಸಣ್ಣ ಪುಟ್ಟ ಘರ್ಷಣೆ ಹೊರತು ಪಡಿಸಿದಂತೆ ಮತದಾನ ಶಾಂತಿಯುತವಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ತಿಳಿಸಿದ್ದಾರೆ.