4 ಬಸ್ ಬಾಡಿಗೆ ಮತದಾರರ ಬಂಧನ : ಮದ್ಯ, ಗುರುತು ಚೀಟಿ ವಶ
ಬೆಂಗಳೂರು : ನಕಲಿ ಮತದಾನ ಮಾಡುವ ಸಲುವಾಗಿ ನಾಲ್ಕು ಬಸ್ಗಳಲ್ಲಿ ಬಂದರೆನ್ನಲಾದ ಬಾಡಿಗೆ ಮತದಾರರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಕಲಿ ಗುರುತುಚೀಟಿ ಹಾಗೂ ಸಾವಿರಾರು ರುಪಾಯಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ಬೆಳಗ್ಗೆ ನಾಲ್ಕು ಬಸ್ಗಳಲ್ಲಿ ಜಯನಗರದ ಜಿ.ಎನ್.ಆರ್. ಕಲ್ಯಾಣ ಮಂಟಪಕ್ಕೆ ಬಂದಿಳಿದ ಗುಂಪಿನ ಚಲನವಲನಗಳ ಬಗ್ಗೆ ಅನುಮಾನಗೊಂಡು ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಮತದಾನ ಮಾಡುವ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಈ ಜನರನ್ನು ಕರೆಸಿದೆ ಎಂದು ಜನತಾದಳ ಕಾರ್ಯಕರ್ತರು ಪೊಲೀಸರಿಗೆ ಸುಳಿವು ನೀಡಿದ್ದರು.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ಪಕ್ಷವು ನಕಲಿ ಮತದಾನ ಮಾಡಿಸುವ ಸಲುವಾಗಿ, 54 ಬಸ್ಗಳಲ್ಲಿ ಬೇರೆಬೇರೆ ಊರುಗಳಿಂದ ಬಾಡಿಗೆ ಜನರನ್ನು ಕರೆಸಿದೆ ಎಂದು ಆರೋಪಿಸಿದ್ದಾರೆ.
ಒಬ್ಬ ಕಾರ್ಯಕರ್ತನ ಹತ್ಯೆ : ಬುಧವಾರ ರಾತ್ರಿ ಸಾತನೂರು ಬಳಿ ಹಣಕಡಚೂರಿನಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ಎಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಜೆಡಿಎಸ್ನ ಒಬ್ಬ ಕಾರ್ಯಕರ್ತ ಹತನಾಗಿದ್ದಾನೆ. ಈ ಕೊಲೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಜನತಾದಳ ಎಸ್ ಆರೋಪಿಸಿದೆ.(ಇನ್ಫೋ ವಾರ್ತೆ)