ಚಿಕ್ಕಮಗಳೂರು : ಹದಿನೈದು ದಿನದೊಳಗೆ ಮತ್ತೊಂದು ಹುಲಿ ಹತ್ಯೆ
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಮತ್ತೊಂದು ಹುಲಿಯ ಹತ್ಯೆ ನಡೆದಿದೆ. ಭಾರಿ ಗಾತ್ರದ ಹೆಣ್ಣು ಹುಲಿಯಾಂದನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದು ಹಾಕಿದ್ದು, ಕೊಳೆತು ನಾರುತ್ತಿದ್ದ ಹುಲಿಯ ದೇಹ ಸೋಮವಾರ ಕಾಫಿ ತೋಟವೊಂದರಲ್ಲಿ ಪತ್ತೆ ಆಗಿದೆ.
ಕಳೆದ 15 ದಿನಗಳ ಹಿಂದೆ (ಜ.20) ಕಡವಂತಿ ಸಮೀಪದ ಬಾಳೆಖಾನ್ ರಸ್ತೆಯಲ್ಲಿರುವ ಮೊನಿಷ ತೋಟದಲ್ಲಿ ಹಾಕಲಾಗಿದ್ದ ಉರುಳಿಗೆ ಕೊರಳೊಡ್ಡಿದ 10 ವರ್ಷದ ಹುಲಿಯಾಂದು ಬಿಡಿಸಿಕೊಳ್ಳಲು ಒದ್ದಾಡಿ, ಉಸಿರುಕಟ್ಟಿ ಕೊನೆಯುಸಿರೆಳೆದಿತ್ತು.
ಈ ಬಾರಿ ವಸ್ತಾರೆ ಹೋಬಳಿ ಹಂಚರವಳ್ಳಿ ಗ್ರಾಮದ ಅತ್ತಿಕಟ್ಟೆ ಗುರುನಾಥೇ ಗೌಡರ ಕಾಫಿ ತೋಟದಲ್ಲಿ ಗುಂಡಿಟ್ಟು ಕೊಲ್ಲಲಾದ ಹುಲಿಯ ದೇಹ ಪತ್ತೆಯಾಗಿದೆ. ಗುಂಡೇಟಿನಿಂದ ಗಾಯಗೊಂಡ ಹುಲಿಯು ಕಾಫಿ ತೋಟಕ್ಕೆ ಬಂದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ ಎನ್ನಲಾಗಿದೆ.
ಗಾಯಗೊಂಡ ಹುಲಿ ಬಂದ ದಾರಿಯಲ್ಲಿ ರಕ್ತದ ಕಲೆಗಳು ಮೂಡಿದ್ದವು. ರಕ್ತದ ಕಲೆ ನೋಡಿದ ತೋಟದ ಕಾರ್ಮಿಕ ರಾಜಶೇಖರ ಕಲೆಯನ್ನೇ ಹಿಂಬಾಲಿಸಿ ಹೊರಟಾಗ ದುರ್ನಾತ ಬೀರುತ್ತಿದ್ದ ಹುಲಿಯ ದೇಹ ಪತ್ತೆಯಾಯಿತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ರಾತ್ರಿ ತೋಟಕ್ಕೆ ಆಗಮಿಸಿ. ಹುಲಿಯ ದೇಹವನ್ನು ವಶಪಡಿಸಿಕೊಂಡರು.
ಸತ್ತ ಹೆಣ್ಣು ಹುಲಿಗೆ ಸುಮಾರು ಮೂರ್ನಾಲ್ಕು ವರ್ಷ ಇರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. 157 ಮೀಟರ್ ಉದ್ದ ಇರುವ ಈ ಹುಲಿಯ ದೇಹದ ಮೇಲೆ ಮೂರು ಗುಂಡೇಟಿನ ಗಾಯಗಳಾಗಿವೆ. ಉದ್ದೇಶ ಪೂರ್ವಕವಾಗಿಯೇ ಯಾರೋ ಗುಂಡು ಹಾರಿಸಿ ಹುಲಿಯನ್ನು ಕೊಂದಿದ್ದಾರೆ ಎಂದು ಶಂಕಿಸಲಾಗಿದೆ.
ಅರಣ್ಯ ಇಲಾಖೆಯೇ ಹೊಣೆ: ಈ ಪ್ರದೇಶದಲ್ಲಿ ಹುಲಿಗಳು ಸ್ವೇಚ್ಚೆಯಾಗಿ ವಿಹರಿಸುತ್ತಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದರೂ ಕೂಡ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ಮೇಲೆ ಪರಿಸರ ವಾದಿ ಸ. ಗಿರಿಜಾಶಂಕರ್ ಕಿಡಿ ಕಾರಿದ್ದಾರೆ. ಹುಲಿಯ ಸಂತತಿ ಅವಸಾನದ ಅಂಚಿನಲ್ಲಿರುವಾಗ, ಕೇವಲ 15 ದಿನಗಳ ಅಂತರದಲ್ಲಿ ಕಾಫಿಯ ತವರಿನಲ್ಲಿ ನಡೆದಿರುವ ಎರಡು ಹುಲಿಗಳ ಹತ್ಯೆ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಹುಲಿಯಾಂದು ತನ್ನ ಎರಡು ಮರಿಗಳೊಂದಿಗೆ ಮಲ್ಲಂದೂರು, ಅವತಿ ಮತ್ತಿತರೆಡೆ ಓಡುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications