ಶಿವಕುಮಾರ್ ರಾಜೀನಾಮೆ ಇಲ್ಲ, ಅವರಿಂದ ಚುನಾವಣೆಗೆ ಅಡ್ಡಿಯಿಲ್ಲ-ಕೃಷ್ಣ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸ್ಪರ್ಧೆಯಿಂದ ಪ್ರತಿಷ್ಠಿತ ಕ್ಷೇತ್ರವಾಗಿ ಪರಿಣಮಿಸಿರುವ ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ನ್ಯಾಯಯುತ ಹಾಗೂ ಪಾರದರ್ಶಕವಾಗಿ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೋಮವಾರ ಪ್ರಕಟಿಸಿದರು.
ದೇವೇಗೌಡ ಅವರ ಸ್ಪರ್ಧೆಯಿಂದಾಗಿ ದೇಶದ ಗಮನ ಸೆಳೆದಿರುವ ಕನಕಪುರ ಲೋಕಸಭಾ ಕ್ಷೇತ್ರದ ಫೆ.21 ರ ಚುನಾವಣೆಯಲ್ಲಿ ಅವ್ಯವಹಾರ ಉಂಟಾಗುವ ಗುಮಾನಿಗಳನ್ನು ಕೃಷ್ಣ ಸ್ಪಷ್ಟವಾಗಿ ನಿರಾಕರಿಸಿದರು.
ದೇವೇಗೌಡರಿಗೆ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿರುವ ಸಹಕಾರ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎನ್ನುವ ಜಾತ್ಯತೀತ ಹಾಗೂ ಸಂಯುಕ್ತ ಜನತಾದಳಗಳ ಮುಖಂಡರ ಒತ್ತಾಯವನ್ನು ಕೃಷ್ಣ ಸಾರಾ ಸಗಟಾಗಿ ತಳ್ಳಿ ಹಾಕಿದರು. ಈ ಮುನ್ನ , ಶಿವಕುಮಾರ್ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವುದರಿಂದ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಶಂಕೆ ವ್ಯಕ್ತಪಡಿಸಿದ್ದರು.
ಚುನಾವಣೆಗೆ ಸ್ಪರ್ಧಿಸಿದ ಕಾರಣಕ್ಕಾಗಿ ಸಚಿವರೊಬ್ಬರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪೂರ್ವ ನಿದರ್ಶನ ಇಲ್ಲ . ತಮ್ಮ 40 ವರ್ಷಗಳ ರಾಜಕೀಯ ಜೀವಿತದಲ್ಲಿ ಚುನಾವಣೆ ಸ್ಪರ್ಧೆಗೋಸ್ಕರ ಸಚಿವರೊಬ್ಬರು ರಾಜಿನಾಮೆ ನೀಡಿದ ಪ್ರಕರಣವನ್ನು ತಾವು ನೋಡಿಯೇ ಇಲ್ಲ ಎಂದು ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ