ಸಾಫ್ಟ್ವೇರ್ ದಿಗ್ಗಜರ ಊರಿನವರಿಗೆ ರಸ್ತೆ ನಿಯಮಗಳು ಗೊತ್ತಿಲ್ಲವಂತೆ...
ಬೆಂಗಳೂರು : ಸಾಫ್ಟ್ವೇರ್ ಕ್ಷೇತ್ರದಲ್ಲಿ ದಿಗಂತಕ್ಕೇರಿದ ಬೆಂಗಳೂರಿನ ಮಂದಿಗೆ ರಸ್ತೆ ನಿಯಮಗಳ ಬಗ್ಗೆ ಅಷ್ಟೇನೂ ಜ್ಞಾನವಿಲ್ಲವಂತೆ. ಹೀಗೆಂದು ಸ್ಟೇಟ್ಮೆಂಟ್ ಕೊಟ್ಟಿರುವುದು ಲಂಡನ್ನ ಅಂತರರಾಷ್ಟ್ರೀಯ ರಸ್ತೆ ಸುರಕ್ಷಾ ಸಲಹೆಗಾರ ಆಂಡ್ರಿವ್ ಡೌನಿಂಗ್. ನಗರದಲ್ಲಿ ನಡೆಯುವ ರಸ್ತೆ ಅಪಘಾತಗಳ ಪೈಕಿ ಹೆಚ್ಚಿನವು ಪಾದಾಚಾರಿಗಳದ್ದು ಹಾಗೂ ದ್ವಿಚಕ್ರವಾಹನ ಚಾಲಕರಾಗಿರುತ್ತದೆ. ಯಾಕೆಂದರೆ ಅವರಿಗೆ ರಸ್ತೆ ನಿಯಮಗಳ ಬಗ್ಗೆ ಏನೇನೂ ಅರಿವಿಲ್ಲ.
ಆಂಡ್ರಿವ್ ಪ್ರಕಾರ ಬೆಂಗಳೂರಿನಲ್ಲಿ ತಕ್ಷಣವೇ ಆಗಬೇಕಾದ ಕೆಲಸವೆಂದರೆ ರಸ್ತೆಗಳ ದುರಸ್ತಿ ಹಾಗೂ ರಸ್ತೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದು. ವಿಶ್ವಬ್ಯಾಂಕ್ ಆಯೋಜಿಸಿದ ಜಾಗತಿಕ ರಸ್ತೆ ಸುರಕ್ಷತೆ ಅಭಿಯಾನದ ಅಂಗವಾಗಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಕಾರ್ಯನಿರತ ಪಡೆಯ ಜೊತೆ ಆಂಡ್ರಿವ್ ಕೆಲಸ ಮಾಡುತ್ತಿದ್ದು, ಮೊದಲ ಯೋಜನೆ ಸಾರ್ವಜನಿಕರ ರಸ್ತೆ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೊಳಿಸುವುದು. ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡೇ ಬೆಂಗಳೂರಿನ ರಸ್ತೆ ದುರಂತಗಳ ಕಡೆಗೆ ಆಂಡ್ರಿವ್ ಗಮನ ಹರಿಸುತ್ತಾರೆ.
ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವರು ನೀಡುವ ಸಲಹೆಗಳೆಂದರೆ- ಯಾವುದೇ ರಸ್ತೆ ನಿರ್ಮಿಸುವಾಗ, ಅಥವಾ ರಸ್ತೆ ದುರಸ್ತಿ ಮಾಡುವಾಗ ಮೊತ್ತ ಮೊದಲು ಪಾದಾಚಾರಿಗಳನ್ನು ಗಮನದಲ್ಲಿಟ್ಟುಕೊಂಡೇ ಯೋಜನೆಗಳನ್ನು ರೂಪಿಸಬೇಕು. ರಸ್ತೆ ದಾಟುವ ವ್ಯವಸ್ಥೆಗಳು, ಫೂಟ್ಪಾತ್ಗಳ ಸೌಲಭ್ಯ ನಿಖರವಾಗಿರಬೇಕು.
ಆಲ್ಕೋಹಾಲ್ ಸೇವಿಸಿ ಡ್ರೆೃವ್ ಮಾಡುವವರ ವಿರುದ್ಧ ಆಂಡ್ರಿವ್ ಕಿಡಿಕಾರುತ್ತಾರೆ. ಹಾಗೆಯೇ ಸಾರ್ವಜನಿಕರ ಹಿತದೃಷ್ಠಿಯಿಂದ ಹೆಲ್ಮೆಟ್ ಕಡ್ಡಾಯ ಕೂಡ ಅಗತ್ಯ. ವರ್ಷಕ್ಕೆ ಐದು ಬಾರಿ ಬೆಂಗಳೂರಿಗೆ ಭೇಟಿ ನೀಡುವ ಆಂಡ್ರಿವ್ ಇಲ್ಲಿನ ರಸ್ತೆ ಸಂಚಾರ ವ್ಯವಸ್ಥೆಗಳು, ಯೋಜನೆಗಳ ಅಳವಡಿಕೆಯ ಬಗ್ಗೆ ಗಮನ ಹರಿಸುತ್ತಾರೆ. ಎಲ್ಲವೂ ಸರಿಯಾಗಿಯೇ ನಡೆದರೆ, ಇನ್ನೈದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳು ನೀಟಾಗುತ್ತವೆ. ದೇಶದ ಇತರ ಮಹಾನಗರಗಳಿಗೆ ಬೆಂಗಳೂರು ಮಾದರಿಯಾಗುತ್ತದೆ ಎಂದು ಆಂಡ್ರಿವ್ ಕನಸು ಕಾಣುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications