ಕೃಷ್ಣ ನಗರಿ ಉಡುಪಿಯ ವಸಂತ ಮಹಲಿನಲ್ಲಿ ಮಧ್ವಚಾರ್ಯ ಮೂರ್ತಿ
ಉಡುಪಿ : ಇಲ್ಲಿನ ಶ್ರೀಕೃಷ್ಣ ಮಠದ ವಸಂತ ಮಹಲಿನ ಮಧ್ವ ಮಂಟಪದಲ್ಲೀಗ ಹೊಸ ಮಧ್ವ ಮೂರ್ತಿ.
ಸಂಕ್ರಾಂತಿಯ ಶುಭದಿನವಾದ ಸೋಮವಾರ ವಿಶ್ವೇಶ ತೀರ್ಥ ಸ್ವಾಮೀಜಿ ಮಧ್ವ ಮೂರ್ತಿಯನ್ನು ಅನಾವರಣಗೊಳಿಸಿದರು. ಆಶೀರ್ವಚನ ನೀಡಿದ ಪೇಜಾವರ ಶ್ರೀಪಾದರು, ಭಕ್ತಿ ಜ್ಞಾನ ಸಿದ್ಧಾಂತ ಹಾಗೂ ತತ್ತ್ವಜ್ಞಾನ ಪರಂಪರೆಗೆ ಕೊಡುಗೆ ನೀಡಿರುವ ಮಧ್ವಾಚಾರ್ಯರನ್ನು ಸಕಲ ವರ್ಗದವರೂ ನೆನಪಿನಲ್ಲಿಡಲಿ ಎಂಬುದೇ ಮಧ್ವ ಮೂರ್ತಿ ಸ್ಥಾಪನೆಯ ಉದ್ದಿಶ್ಯ ಎಂದರು.
ನಾಲ್ಕು ಅಡಿ ಎತ್ತರದ ಜ್ಞಾನಮುದ್ರೆಯ ಮೂರ್ತಿ ಹೊಯ್ಸಳರ ಶೈಲಿಯಲ್ಲಿದೆ. ಸೂರಾಲು ವೆಂಕಟ್ರಮಣ ಭಟ್ ಇದರ ರಚನಕಾರ. ಇವರು ಕೇವಲ ಒಂದು ತಿಂಗಳ ಅವಧಿಯಲ್ಲಿ ಮಧ್ವಾಚಾರ್ಯರ ಕರಿಶಿಲಾ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಕಾಣಿಯೂರು ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ವಿಶ್ವಪ್ರಿಯ ಸ್ವಾಮೀಜಿ ಮೊದಲಾದವರು ಮೂರ್ತಿ ಅನಾವರಣ ಸಮಾರಂಭದಲ್ಲಿ ಹಾಜರಿದ್ದರು. ಮೂರ್ತಿ ಅನಾವರಣಕ್ಕೆ ಮುಂಚೆ ಬಡಗುಮಾಳಿಯಲ್ಲಿ ಮಹಾಗಣಪತಿ ಯಾಗವನ್ನು ಮಾಡಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...