ಉಡುಪಿ ಶ್ರೀಕೃಷ್ಣ ದೇಗುಲದಿ ನೆಲೆಸುತಿಹರು ಕನಕದಾಸರು
ಉಡುಪಿ : ಶ್ರೀಕೃಷ್ಣನ ಆಡುಂಬೋಲ ಉಡುಪಿಯ ದೇವಾಲಯದೊಳಗೆ ಕಾಲಜ್ಞಾನಿ ಕನಕದಾಸರ ಗೌರವಾರ್ಥ ‘ಕನಕಮಂಟಪ’ ನಿರ್ಮಿಸಲಾಗಿದೆ. ಈ ಮಂಟಪವನ್ನು ಡಿ.27ರಂದು ರಾಜ್ಯದ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಉದ್ಘಾಟಿಸಲಿದ್ದಾರೆ.
ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಪೇಜಾವರದ ಶ್ರೀವಿಶ್ವೇಶತೀರ್ಥ ಸ್ವಾಮೀಜೀ, ದೇವಾಲಯದಲ್ಲಿರುವ ಐತಿಹಾಸಿಕ ಕನಕನಕಿಂಡಿಯು ಭೂಕಂಪದಿಂದ ಉಂಟಾದದ್ದು ಎಂಬುದಕ್ಕೆ ಲಿಖಿತ ಸಾಕ್ಷ್ಯಗಳು ಸಿಕ್ಕಿವೆ. ಈ ಕುರಿತು ಬಹಳ ಪ್ರಾಚೀನ ಕಡತವೊಂದರಲ್ಲಿ ಲಿಖಿತ ಸಾಕ್ಷ್ಯಗಳಿವೆ. 1965ರಲ್ಲಿ ನಡೆದ ಕನಕ ಜಯಂತಿ ಉತ್ಸವದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಕೂಡ ಇದರ ಉಲ್ಲೇಖವಿದೆ ಎಂದು ಸ್ವಾಮೀಜಿ ತಿಳಿಸಿದರು.
ಕನಕದಾಸರು ಶ್ರೀಕೃಷ್ಣ ದರ್ಶನಾರ್ಥ ಉಡುಪಿಗೆ ಬಂದಾಗ, ಅವರಿಗೆ ದರ್ಶನ ನಿರಾಕರಿಸಲಾಯಿತು. ಆಗ ದಾಸರು ದೇವಾಲಯದ ಹಿಂಭಾಗಕ್ಕೆ ಹೋಗಿ ಶ್ರೀಕೃಷ್ಣನ ಮೊರೆಯಿಟ್ಟರು. ಆಗ ಪವಾಡ ಘಟಿಸಿ, ದೇವಾಲಯದ ಹಿಂಭಾಗದ ಗೋಡೆ ಬಿರುಕುಬಿಟ್ಟು, ಶ್ರೀಕೃಷ್ಣ ದಿಕ್ಕು ಬದಲಿಸಿ ದಾಸರಿಗೆ ದರ್ಶನ ಕೊಟ್ಟ ಎಂಬುದು ಜನಜನಿತ ಕಥೆ.
ಈ ಸಂದರ್ಭದಲ್ಲಿ ಪ್ರಕೃತಿ ಸಹ ಪವಾಡವನ್ನೇ ಮೆರೆದಿದೆ. ಭೂಕಂಪ ಸಂಭವಿಸಿ, ಗೋಡೆಯಲ್ಲಿ ಕಿಂಡಿ ಮೂಡಿದೆ. ಇಂತಹ ಪವಾಡಕ್ಕೆ ಕಾರಣರಾದ ಪವಾಡ ಪುರುಷನಿಗೆ ದೇವಾಲಯದಲ್ಲಿ ಸೂಕ್ತ ಸ್ಥಾನ ನೀಡಲು, ಕನಕ ಮಂಟಪ ನಿರ್ಮಿಸಲಾಗಿದೆ, ಅಲ್ಲಿ ಶ್ರೀ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀಗಳು ಹೇಳಿದರು.
ಮಧ್ವ ಮಂಟಪ : ಹಿಂದಿನ ವಸಂತ ಮಹಲ್ ಅನ್ನು ಮಧ್ವ ಮಂಟಪವನ್ನಾಗಿ ಮಾರ್ಪಡಿಸಲಾಗಿದೆ. ಅಲ್ಲಿ ಮಧ್ವಾಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು. ಡಿ.27ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಸಹ ಪಾಲ್ಗೊಳ್ಳುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications