ಭಾರತ ಹಾಗೂ ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಮರ ಪ್ರಾರಂಭ
ನವದೆಹಲಿ : ಡಿ. 13 ರಂದು ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಹಿಂದಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದಿರುವ ಪಾಕಿಸ್ತಾನದ ನಿಲುವನ್ನು ಪ್ರತಿಭಟಿಸಿ ಪಾಕ್ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ಸು ಕರೆಸಿಕೊಳ್ಳಲು ಭಾರತ ನಿರ್ಧರಿಸಿದೆ.
ಗಡಿಯಾಚೆಗಿನ ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುತ್ತಿರುವ ಪಾಕ್ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಭಾರತ ಸರ್ಕಾರ ಪಾಕ್ ವಿರುದ್ಧ ಕಠಿಣ ವಿದೇಶಾಂಗ ನೀತಿಯನ್ನು ಶುಕ್ರವಾರ ಪ್ರಕಟಿಸಿತು. ಹೈ ಕಮೀಷನರ್ ವಾಪಸಾತಿ ಮಾತ್ರವಲ್ಲದೆ ಉಭಯ ದೇಶಗಳ ನಡುವಣ ಬಸ್ಸು ಹಾಗೂ ರೈಲು ಸಂಚಾರವನ್ನು ನಿಲ್ಲಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರೆ ನಿರುಪಮಾ ರಾವ್ ತಿಳಿಸಿದ್ದಾರೆ.
ಪ್ರಧಾನಿ ವಾಜಪೇಯಿ ಅವರ ನಿವಾಸದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆ ಪಾಕ್ ಜೊತೆಗಿನ ತನ್ನ ವಿದೇಶಾಂಗ ನೀತಿಯನ್ನು ಬದಲಿಸಿಕೊಳ್ಳುವ ಪ್ರಮುಖ ನಿರ್ಣಯಗಳನ್ನು ಕೈಗೊಂಡಿತು. ಉಗ್ರಗಾಮಿ ಗುಂಪುಗಳಾದ ಲಷ್ಕರ್-ಎ- ತೊಯಿಬಾ ಹಾಗೂ ಜೈಷ್-ಎ-ಮೊಹಮ್ಮದ್ ಗಳನ್ನು ನಿಷೇಧಿಸದಿರುವ ಪಾಕಿಸ್ತಾನದ ತಟಸ್ಥ ಧೋರಣೆಯನ್ನು ವಿರುದ್ಧ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಟ್ಟಾರಿ ಹಾಗೂ ಲಾಹೋರ್ ಮಧ್ಯೆ ಸಂಚರಿಸುವ ಸಂಜೋತಾ ಎಕ್ಸ್ಪ್ರೆಸ್, ದೆಹಲಿ- ಲಾಹೋರ್ ನಡುವವಿನ ಬಸ್ ಸಂಚಾರ ಜನವರಿ 1 ರಿಂದ ರದ್ದಾಗಲಿದೆ. ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ನಂಬಿಯಾರ್ ಅವರಿಗೂ ಭಾರತಕ್ಕೆ ವಾಪಸ್ಸಾಗುವಂತೆ ತಿಳಿಸಲಾಗಿದೆ ಎಂದು ನಿರುಪಮಾ ರಾವ್ ತಿಳಿಸಿದ್ದಾರೆ.
ದುರದೃಷ್ಟಕರ : ರಾಯಭಾರಿಯನ್ನು ವಾಪಸ್ಸು ಕರೆಸಿಕೊಳ್ಳುತ್ತಿರುವ ಭಾರತದ ಕ್ರಮ ದುರದೃಷ್ಟಕರ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ವಕ್ತಾರರು ಬಣ್ಣಿಸಿದ್ದಾರೆ. ಬಸ್ ಹಾಗೂ ರೈಲು ಸಂಚಾರ ರದ್ದಾಗುವುದರಿಂದ ಉಭಯ ದೇಶಗಳ ಜನ ತೊಂದರೆ ಅನುಭವಿಸುತ್ತಾರೆ ಎಂದೂ ಅವರು ತಿಳಿಸಿದ್ದಾರೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...