ಬೆಳಗಾವಿ ಹಾಗೂ ಸಿಡ್ನಿಯಲ್ಲಿ ರಾಮಕೃಷ್ಣ ಮಿಷನ್ನ ನೂತನ ಶಾಖೆ
ಕೋಲ್ಕತಾ : ಅಧ್ಯಾತ್ಮಿಕ ಪ್ರಸಾರ ಹಾಗೂ ಸಮಾಜಸೇವೆಯ ಮುಂಚೂಣಿಯಲ್ಲಿರುವ ರಾಮಕೃಷ್ಣ ಮಿಷನ್ ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮೂರು ಶಾಖೆಗಳನ್ನು ತೆರೆಯುವ ಮೂಲಕ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಉದ್ದೇಶಿಸಿದೆ.
ಬೆಳಗಾವಿಯಾಂದಿಗೆ ಜಮ್ಮು ಮತ್ತು ವಿಜಯವಾಡದಲ್ಲೂ ರಾಮಕೃಷ್ಣ ಮಿಷನ್ನ ಶಾಖೆ ಪ್ರಾರಂಭವಾಗಲಿದೆ. ಇತ್ತೀಚೆಗೆ ನಡೆದ ರಾಮಕೃಷ್ಣ ಮಿಷನ್ನ 92 ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಿಷನ್ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸ್ಮರಣಾನಂದ ತಿಳಿಸಿದ್ದಾರೆ.
ಈ ವರ್ಷ ದೇಶದ 1700 ಹಳ್ಳಿಗಳಲ್ಲಿ 6.55 ಕೋಟಿ ರುಪಾಯಿ ವೆಚ್ಚದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ಮಿಷನ್ ಕೈಗೊಂಡಿದ್ದು , 12 ಲಕ್ಷ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಚಂಡಮಾರುತಕ್ಕೆ ತುತ್ತಾದ ಒರಿಸ್ಸಾ ಹಾಗೂ ಭೂಕಂಪಕ್ಕೆ ತುತ್ತಾದ ಗುಜರಾತ್ಗಳಲ್ಲಿ ಹಲವಾರು ಶಾಲೆಗಳನ್ನು ಮಿಷನ್ ಸ್ಥಾಪಿಸಿದೆ. ಗ್ರಾಮೀಣ ಮತ್ತು ಬುಡಕಟ್ಟು ಯೋಜನೆಗಳಿಗೆ 9.11 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ.
ಬಡ ವಿದ್ಯಾರ್ಥಿಗಳಿಗೆ 2.19 ಕೋಟಿ ರುಪಾಯಿ ವಿದ್ಯಾರ್ಥಿ ವೇತನವನ್ನು ನೀಡಲು ಮಿಷನ್ ಉದ್ದೇಶಿಸಿದೆ. ಬಾಂಗ್ಲಾದೇಶದ ಬಾಗೇರಾತ್ನಲ್ಲಿ ದೇವಸ್ಥಾನ ಹಾಗೂ ಸಿಡ್ನಿಯಲ್ಲಿ ಮಿಷನ್ನ ನೂತನ ಶಾಖೆಯನ್ನು ಅಂತರರಾಷ್ಟ್ರೀಯ ಕಾರ್ಯಾಚರಣೆಯಡಿ ಸ್ಥಾಪಿಸಲಾಗುವುದು ಎಂದು ಸ್ವಾಮಿ ಸ್ಮರಣಾನಂದ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...