ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿಸೆಂಬರ್ 22, 23ರಂದು ರಾಜ್ಯಾದ್ಯಂತ ಮೆಡಿಕಲ್ ಬಂದ್
ಬೆಂಗಳೂರು : ರಾಜ್ಯದಲ್ಲಿರುವ ನಕಲಿ ವೈದ್ಯರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯ ಸಂಘದ ರಾಜ್ಯ ಶಾಖೆ ಡಿಸೆಂಬರ್ 22 ಮತ್ತು 23ರಂದು ರಾಜ್ಯ ಮೆಡಿಕಲ್ ಬಂದ್ಗೆ ಕರೆ ಕೊಟ್ಟಿದೆ.
ರಾಜ್ಯ ಸರಕಾರಿ ವೈದ್ಯರ ಸಂಘ, ರಾಜ್ಯ ಕಿರಿಯ ವೈದ್ಯರ ಸಂಘ, ಕರ್ನಾಟಕ ವೈದ್ಯ ಅಧ್ಯಾಪಕರ ಸಂಘ ಹಾಗೂ ಭಾರತೀಯ ದಂತ ವೈದ್ಯರ ಸಂಘದ ರಾಜ್ಯ ಶಾಖೆ ಬಂದ್ಗೆ ಈಗಾಗಲೇ ಬೆಂಬಲ ಘೋಷಿಸಿವೆ. ಈ ವಿಷಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ. ಎ. ಎಸ್. ಮಂತಗಾನಿಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರಿರುವ ಬಗ್ಗೆ ದೂರುಗಳಿವೆ. ಆ ಬಗ್ಗೆ ಶೀಘ್ರ ತನಿಖೆ ನಡೆಸಿ ಅವರ ವೃತ್ತಿಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಬೇಕೆಂಬ ಸುಪ್ರೀಂ ಕೋರ್ಟ್ನ ಆದೇಶವನ್ನು ಪಾಲಿಸಬೇಕು ಎಂದು ವೈದ್ಯರ ಸಂಘ ಸರಕಾರವನ್ನು ಒತ್ತಾಯಿಸಿದೆ.
ವೈದ್ಯರ ಸಂಘದ ಇತರ ಬೇಡಿಕೆಗಳು :
- 5 ವರ್ಷದವರೆಗೆ ಹೊಸ ವೈದ್ಯಕೀಯ ಕಾಲೇಜಿಗೆ ಅನುಮತಿಕೊಡಬಾರದು.
- ವೃತ್ತಿ ನಿರತ ವೈದ್ಯರ ಮೇಲೆ ಸಾರ್ವಜನಿಕರು ನೀಡುವ ದೂರಿನ ಮೇಲೆ ಪೊಲೀಸರು ಅವರನ್ನು ಬಂಧಿಸುವ ಮೊದಲು ಭಾರತೀಯ ವೈದ್ಯ ಸಂಘದ ಪ್ರತಿನಿಧಿಗಳಿರುವ ಮೆಡಿಕಲ್ ಬೋರ್ಡ್ನ ಅನುಮತಿ ಪಡೆಯಬೇಕು.
- ವೈದ್ಯರು ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಚಿಕಿತ್ಸೆ ನೀಡುವಾಗ ಆಗಬಹುದಾದ ಮರಣವನ್ನು ಭಾರತೀಯ ದಂಡ ಸಂಹಿತೆ 304 ಮತ್ತು 304 ಎ ಪ್ರಕಾರ ವೈದ್ಯರ ಮೇಲೆ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಬಾರದು.
- ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಪಟ್ಟ ಬೋರ್ಡ್ ಮತ್ತು ಮಂಡಳಿಗಳಿಗೆ ವೈದ್ಯರು ಮಾತ್ರವೇ ಮುಖ್ಯಸ್ಥರಾಗಬೇಕು.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, December 24, 2001, 5:30 [IST]