ಕಾರ್ಕಳದ ಕಾಮತ್ ವೀಡಿಯೋಸ್ನಲ್ಲಿ ಮಿನಿ ಸಿನೆಮೋತ್ಸವ
ಕಾರ್ಕಳ : ಇಲ್ಲಿನ ಯುವ ಪ್ರತಿಭಾ ವೇದಿಕೆಯು ಡಿಸೆಂಬರ್ 16ರಿಂದ ಕಾಮತ್ ವೀಡಿಯೋಸ್ನಲ್ಲಿ ಮಿನಿ ಸಿನೆಮೋತ್ಸವವನ್ನು ಆಯೋಜಿಸಿದೆ.
ಗ್ರಾಮೀಣ ಪ್ರದೇಶದ ಜನತೆಯಲ್ಲಿ ಚಲನಚಿತ್ರದ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಮಿನಿ ಸಿನೆಮೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಂಯೋಜಕರಲ್ಲೊಬ್ಬರಾದ ಶೇಖರ್ ಅಜೆಕಾರ್ ತಿಳಿಸಿದ್ದಾರೆ. ಬಂಗಾರ್ ಪಟ್ಲೇರ್ ತುಳು ಸಿನೆಮಾ ಖ್ಯಾತಿಯ ಹಾಗೂ ಕನ್ನಡ , ಕೊಂಕಣಿ ಸಿನೆಮಾ ನಿರ್ದೇಶಕರಾದ ರಿಚರ್ಡ್ ಕ್ಯಾಸ್ಟಲಿನೋ, ಸಿನೆಮೋತ್ಸವದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ತುಳು ರಂಗಭೂಮಿ ನಿರ್ದೇಶಕ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಕೂಡ ಉತ್ಸವದಲ್ಲಿ ಭಾಗವಹಿಸುವರು.
ಪುಟ್ಟ ಪುಟ್ಟ ಸಾಕ್ಷ್ಯ ಚಿತ್ರಗಳ ಪ್ರದರ್ಶನವೂ ಈ ಸಂದರ್ಭದಲ್ಲಿ ನಡೆಯಲಿದೆ. ಬಿ.ಜಯಶ್ರೀ ನಿರ್ದೇಶನದ ಗಿರಿಜಾ, ಪ್ರಕಾಶ್ ಬಾಬು ನಿರ್ದೇಶನದ ಮಧ್ಯಾಹ್ನದ ಹಾಡು, ಕೆ. ಮೋಹನ್ ದಾಸ್ ಪೈ ಮಾರ್ಗದರ್ಶನದ ಮಾಯಾ ಜಗತ್ತು, ಪಿ. ಶೇಷಾದ್ರಿ ನಿರ್ದೇಶನದ ಕರಡಿ ಗುಡ್ಡದಾಗ ಮಳೆ ಹಾಗೂ, ನಾಗರಿಕ ಸೇವಾ ಟ್ರಸ್ಟ್ನವರು ನಿರ್ದೇಶಿಸಿದ ಕುದ್ರೆಮುಖ ಅಭಿಯಾನ, ಜ್ಯೋತಿ ಇರ್ವತ್ತೂರು ನಿರ್ದೇಶನದ ನೀರು ಕಳೆದಿದೆ ಮತ್ತಿತರ ಚಿತ್ರಗಳನ್ನೂ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...