ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ: ಉಡುಪಿ ಜಿಲ್ಲಾಡಳಿತದ ಸಂಕಲ್ಪ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹತ್ತಾರು ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ, ಈ ತಾಣಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಇದನ್ನು ಮನಗಂಡಿರುವ ಜಿಲ್ಲಾಡಳಿತ 6 ತಿಂಗಳೊಳಗಾಗಿ ಕನಿಷ್ಠ 2 ಬೀಚ್, ಒಂದು ಜಲಪಾತ ಹಾಗೂ ಎರಡು ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಚ್ಚುವರಿ ಮೂಲಭೂತ ಸೌಕರ್ಯ ಒದಗಿಸಲು ತೀರ್ಮಾನಿಸಿದೆ.
ಕಾಯಕಲ್ಪ ಚಿಕಿತ್ಸೆಗೆ ಒಳಗಾಗುತ್ತಿರುವ ಈ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ವಿಖ್ಯಾತ ಸೇಂಟ್ ಮೇರಿ ಐಲ್ಯಾಂಡ್ ಕೂಡ ಸೇರಿದೆ. ಈ ವಿಷಯವನ್ನು ಉಡುಪಿ ಜಿಲ್ಲಾಧಿಕಾರಿ ಗೌರವ್ ಗುಪ್ತಾ ತಿಳಿಸಿದ್ದಾರೆ. ಸೇಂಟ್ ಮೇರಿ ದ್ವೀಪದಲ್ಲೊಂದು ಸುತ್ತು ಹಾಕಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಟಾಸ್ಕ್ಫೋರ್ಸ್ನ ಉಪ ಸಮಿತಿಯು ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಪಟ್ಟಿ ಮಾಡಿದೆ. ಇವುಗಳನ್ನು ಈಗ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಈ ಕೂಡಲೇ 6 ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು. ಆದ್ಯತೆಯ ಮೇಲೆ ಸೇಂಟ್ ಮೇರಿ ದ್ವೀಪ, ಕಾಪು ಲೈಟ್ಹೌಸ್, ಮಲ್ಪೆ , ವಡಬಾಂಡೇಶ್ವರ, ಮರವಂತೆ ಬೀಚುಗಳು ಮತ್ತು ಉಡುಪಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಜುಮ್ಲುತೀರ್ಥ ಜಲಪಾತಗಳಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸಲಾಗುವುದು ಎಂದರು.
ಮಾಹಿತಿ ಕೇಂದ್ರ: ಪಿಲಿಕುಳ ಬಳಿ ಜಿಂಕೆ ಉದ್ಯಾನ ನಿರ್ಮಿಸುವ ಹಾಗೂ ಉಡುಪಿ ಜಿಲ್ಲೆಯ ತಾಣಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ಸ್ಥಾಪಿಸುವ ಉದ್ದೇಶವೂ ಜಿಲ್ಲಾಡಳಿತಕ್ಕಿದೆ. ಹೊಟೆಲ್ ಹಾಗೂ ಪ್ರಮುಖ ಕೇಂದ್ರಗಳಲ್ಲಿ ಪ್ರವಾಸಿಗರಿಗೆ ಮಾಹಿತಿ ದೊರಕುವಂತೆ ಮಾಡಲಾಗುವುದು ಎಂದು ಗುಪ್ತ ತಿಳಿಸಿದರು.
ಜಿಲ್ಲಾಡಳಿತ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮದಡಿಯಲ್ಲಿ ಟೂರಿಸ್ಟ್ ಗೈಡ್ಗಳಿಗೆ ತರಬೇತಿ ನೀಡಲಾಗುವುದು. ಚಾರಣಕ್ಕೂ ಪ್ರಾಶಸ್ತ್ಯ ನೀಡಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಹಾಯಿದೋಣಿಯ (ಬಾರ್ಜ್) ಸೌಲಭ್ಯ ಒದಗಿಸಲಾಗುವುದು ಎಂದೂ ಗುಪ್ತಾ ಹೇಳಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications