ಸಮಗ್ರ ಕನ್ನಡ ಸಾಫ್ಟ್ವೇರ್ ಅಭಿವೃದ್ಧಿಗೊಂದು ಕ್ರಿಯಾಯೋಜನೆ
ಬೆಂಗಳೂರು : ರಾಜ್ಯದ ಆಡಳಿತ ಯಂತ್ರದಲ್ಲಿ ಬಳಸಲು ಅನುಕೂಲವಾಗುವಂತೆ ಸಮಗ್ರ ಕನ್ನಡ ಸಾಫ್ಟ್ವೇರ್ ಅಭಿವೃದ್ಧಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಿಯಾ ಯೋಜನೆಯಾಂದನ್ನು ರೂಪಿಸಿದೆ.
ಪ್ರಾಧಿಕಾರದ ಜೊತೆಗೆ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯು ಈ ಯೋಜನೆಯ ಜವಾಬ್ದಾರಿಯನ್ನು ಹಂಚಿಕೊಂಡಿದೆ. ಪ್ರಾಧಿಕಾರವು ಇದನ್ನು ಆಡಳಿತಕ್ಕೆ ಮಾತ್ರ ಸೀಮಿತಗೊಳಿಸದೆ, ಲೈಬ್ರರಿ, ಉದ್ಯಮ ವ್ಯವಹಾರ, ಅನುವಾದ ಕಾರ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೂ ಈ ಯೋಜನೆಯಿಂದ ಪ್ರಯೋಜನವಾಗುವಂತೆ ಮಾಡಲಿದೆ. ಸಾಮಾನ್ಯ ಕನ್ನಡ ಸಾಫ್ಟ್ವೇರ್ ಒಂದನ್ನು ತಯಾರಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದರಿಂದ ಪ್ರಸ್ತುತ ಇರುವ ಬರಹ, ಶ್ರೀಲಿಪಿ, ಆಕೃತಿ ಮತ್ತಿತರ ಸಾಫ್ಟ್ವೇರ್ಗಳನ್ನು ಬಳಸುವವರಿಗೆ ಉಪಯೋಗವಾಗಲಿದೆ.
ಸಂಶೋಧನೆ ಮಾತ್ರವಲ್ಲದೆ ದೈನಂದಿನ ಕಾರ್ಯಗಳಿಗೂ ಕಂಪ್ಯೂಟರ್ನ್ನು ಬಳಸುತ್ತಿರುವ ಈ ಸಂದರ್ಭದಲ್ಲಿ ಕನ್ನಡಕ್ಕೂ ಈ ಅವಕಾಶದ ಅಗತ್ಯವಿದೆ. ಅಪಾರ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಬಲ್ಲ ಕಂಪ್ಯೂಟರ್ನಲ್ಲಿ ವಿಶ್ವ ಕೋಶ, ನಿಘಂಟುಗಳನ್ನು ಅಳವಡಿಸಿ, ಡೇಟಾ ಬ್ಯಾಂಕ್ ನಿರ್ಮಿಸಲಾಗುವುದು ಎಂದು ಬರಗೂರು ಹೇಳಿದ್ದಾರೆ.
ಕಂಪ್ಯೂಟರ್ನಲ್ಲಿ ಆನ್ವಯಿಕ ಸಾಫ್ಟ್ವೇರ್ನ್ನು ತಯಾರಿಸಿ ಸಾಮಾನ್ಯ ಆಡಳಿತದಲ್ಲಿ ಅಳವಡಿಸಿಕೊಳ್ಳುವುದೂ ಮುಖ್ಯ. ಇಂಥ ಸಾಫ್ಟ್ವೇರ್ಗಳನ್ನು ತಯಾರಿಸಿ ಎಲ್ಲ ಸರಕಾರಿ ಕಚೇರಿಗಳಿಗೆ ಉಚಿತವಾಗಿ ನೀಡಲಾಗುವುದು. ನೌಕರರ ರಜೆ ವಿವರ, ಸಂಬಳದಂತಹ ವಿಷಯಗಳನ್ನು ಕಂಪ್ಯೂಟರ್ನಲ್ಲಿ ಸಂಗ್ರಹಿಸಿಡಲಾಗುವುದು. ಕನ್ನಡ ಲಿಪಿ ಸಾಫ್ಟ್ವೇರ್ ಯೂನಿಕೋಡ್, ಅಕಾರಾದಿ ವಿಂಗಡಣೆ, ಪರಿವಿಡಿ (ಇಂಡೆಕ್ಸಿಂಗ್), ವ್ಯಾಕರಣ ಮತ್ತು ಕನ್ನಡ ಪದ ಪರೀಕ್ಷೆಗಳನ್ನು ಅಳವಡಿಸುವುದು ಹಾಗೂ ಅನುವಾದ ತಂತ್ರಾಂಶಗಳನ್ನೂ ಸಿದ್ಧಪಡಿಸುವ ಕಾರ್ಯ ಈ ಕ್ರಿಯಾ ಯೋಜನೆಯಲ್ಲಿದೆ ಎಂದು ಬರಗೂರು ತಿಳಿಸಿದ್ದಾರೆ.