ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಎಲ್‌.ಭೈರಪ್ಪನವರ ಮೌನಭಂಗ!

By Staff
|
Google Oneindia Kannada News

ಉಡುಪಿ: ತಮ್ಮ ಕಾದಂಬರಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಹಾಗೂ ಹಿಂದುತ್ವ ಪರ ವಿಚಾರಗಳಿಂದ ಪ್ರಬಲ ವಿರೋಧಿಗಳನ್ನೂ ಸೃಷ್ಟಿಸಿಕೊಂಡಿರುವ ಎಸ್‌.ಎಲ್‌. ಭೈರಪ್ಪ ಜ್ಞಾನಪೀಠಕ್ಕೆ ಹತ್ತಿರವಿರುವ ಸಾಹಿತಿ ಎಂದೇ ಸುದ್ದಿಯಲ್ಲಿರುವವರು. ಸಾಮಾನ್ಯವಾಗಿ ಮೌನಮುನಿಗಳಂತಿರುವ ಭೈರಪ್ಪ , ವಿರೋಧ ಸೃಷ್ಟಿಸಿಕೊಳ್ಳಲೆಂದೇ ಮೌನ ಮುರಿಯುತ್ತಾರೆ ಎನ್ನುವ ಮಾತುಗಳುಂಟು. ಭೈರಪ್ಪ ಮತ್ತೆ ಮಾತನಾಡಿದ್ದಾರೆ. ಧರ್ಮ, ದೇವರು, ಮತಾಂತರ ಇತ್ಯಾದಿಗಳ ಬಗ್ಗೆ.

ನವರಾತ್ರಿ ನಿಮಿತ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಭಾನುವಾರ ಜರುಗಿದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ಭೈರಪ್ಪ , ಹಿಂದೂ ಧರ್ಮ, ಕ್ರಿಸ್ತ ಧರ್ಮ, ಸಂಸ್ಕೃತಿ, ಗ್ರೀಕ್‌ ಸಂಸ್ಕೃತಿಯ ನಾಶ ಇತ್ಯಾದಿಗಳ ಬಗ್ಗೆ ಮಾತನಾಡಿದರು.

ಆಧ್ಯಾತ್ಮಿಕ ತಳಹದಿಯನ್ನು ದೂರವಿರಿಸಿ ಹಣ ಹಾಗೂ ಸೇವೆಯ ಹೆಸರಿನಲ್ಲಿ ಪ್ರಸ್ತುತ ಮತಾಂತರ ನಡೆಯುತ್ತಿದೆ ಎನ್ನುವುದು ಅವರ ಮಾತಿನ ಕೇಂದ್ರಬಿಂದು. ಭಾಷಣಕ್ಕೆ ಸಾಕಷ್ಟು ಚಪ್ಪಾಳೆಗಳೂ ಬಿದ್ದವು.

ಆಸ್ಪತ್ರೆ, ಶಾಲೆಯ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರಕ್ಕೆ ತಾತ್ವಿಕ ತಳಹದಿಯಿಲ್ಲ . ಧರ್ಮ ಸ್ವೀಕಾರದ ಸ್ವಾತಂತ್ರ್ಯ ಎನ್ನುವ ಮಾತು ಅಪಬಳಕೆಯಾಗುತ್ತಿದೆ ಎಂದು ಭೈರಪ್ಪ ವಿಷಾದದಿಂದ ಹೇಳಿದರು.

ಧರ್ಮ ಕುರಿತು ಬಹಿರಂಗ ಚರ್ಚೆ ಎಂದಕೂಡಲೇ ಬುದ್ದಿಜೀವಿಗಳು ಹಾಗೂ ರಾಜಕಾರಣಿಗಳು ಗದ್ದಲ ಮಾಡುತ್ತಾರೆ. ಭಾರತದಲ್ಲಿ ಆಧ್ಯಾತ್ಮ ಹಾಗೂ ತತ್ವಜ್ಞಾನದ ಮೇಲೆ ಚರ್ಚೆ ನಡೆಯುತ್ತಿತ್ತೇ ಹೊರತು ತೋಳ್ಬಲದ ಮೇಲಲ್ಲ ಎಂದು ಭೈರಪ್ಪ ಯಾರನ್ನೂ ಉದ್ದೇಶಿಸದೆ ಕಟುವಾಗಿ ನುಡಿದರು.

ಗ್ರೀಕ್‌ ಸಂಸ್ಕೃತಿಯ ಹೊಸಕಿ ಹಾಕಿದ ಕ್ರೆೃಸ್ತಧರ್ಮ

ಇಷ್ಟಕ್ಕೆ ತಕ್ಕಂತೆ ದೇವರನ್ನು ಕಲ್ಪಿಸಿಕೊಳ್ಳುವ ಅವಕಾಶ ಇದ್ದುದರಿಂದಲೇ ಭಾರತದಲ್ಲಿ ಸಂಗೀತ, ನೃತ್ಯ ಮುಂತಾದ ಕಲೆಗಳು ಅಭಿವೃದ್ಧಿ ಹೊಂದಿದವು. ಭರತನ ನಾಟ್ಯಶಾಸ್ತ್ರವನ್ನು ಪಂಚಮವೇದವೆಂದು ಅಂಗೀಕರಿಸಿ- ಸಂಗೀತ, ನಾಟ್ಯಗಳಿಗೆ ದೈವೀಕ ಸ್ಪರ್ಶ ನೀಡಲಾಯಿತು. ಇದೆಲ್ಲ ಹಿಂದೂಧರ್ಮದಲ್ಲಷ್ಟೆ ಸಾಧ್ಯ. ಇಂಥ ಅವಕಾಶ ಇತರ ಧರ್ಮಗಳಲ್ಲಿ ಇಲ್ಲ ಎಂದರು.

ಒಬ್ಬನೇ ದೇವನಿಗೆ ಜೋತುಬೀಳುವ ಹಟವಾದವೂ ಭಾರತದಲ್ಲಿಲ್ಲ . ಹೊಸ ಪೂಜಾಪದ್ಧತಿಗಳು ಹಳೆಯ ಧರ್ಮಗಳನ್ನು ಹೊಸಕಿಹಾಕಲಿಲ್ಲ . ಆದರೆ, ಸಮೃದ್ಧ ಗ್ರೀಕ್‌ ಸಂಸ್ಕೃತಿಯನ್ನು ಕ್ರೆೃಸ್ತ ಧರ್ಮ ಅಳಿಸಿಹಾಕಿತು ಎಂದು ಭೈರಪ್ಪ ಹೇಳಿದರು.

ದೇವರ ವಿವಿಧ ಕಲ್ಪನೆಗಳು, ವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿವಿಧ ಧರ್ಮಗಳ ತಾತ್ವಿಕತೆ ಕುರಿತು ಬಹಿರಂಗ ಚರ್ಚೆ ನಡೆಯಬೇಕೆಂದು ಅವರು ಹೇಳಿದರು. ಪರ್ಯಾಯ ಪೇಜಾವರ ಶ್ರೀಪಾದರು ಆಶೀರ್ವಚನ ನೀಡಿ, ಭೈರಪ್ಪನವರನ್ನು ಸನ್ಮಾನಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಂದಹಾಗೆ, ಭೈರಪ್ಪನವರ ಅಭಿಪ್ರಾಯಗಳನ್ನು ನೀವು ಒಪ್ಪುತ್ತೀರಾ?

ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X