ಕುಂಭ ದ್ರೋಣ ಧಾರೆ: ಬೆಂಗಳೂರಲ್ಲಿ 400 ಮನೆ ಜಲಾವೃತ
ಬೆಂಗಳೂರು : ಕಳೆದ ಎರಡು ಮೂರು ದಿನಗಳಿಂದ ಮಳೆರಾಯ ಪಾಳಿ ಲೆಕ್ಕದಲ್ಲಿ ಸುರಿಯುತ್ತಲೇ ಇದ್ದು, ವಿಮಾನ ನಿಲ್ದಾಣ ಪ್ರದೇಶದ ಬಡಾವಣೆಗಳ ಜನರು ತಾತ್ಕಾಲಿಕವಾಗಿ ಗುಳೆ ಹೊರಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.
ಮಾರತ್ಹಳ್ಳಿ, ಬಸವನಗರ, ತಲಕಾವೇರಿ ನಗರ, ರಾಮೇಶ್ವರ ನಗರ, ಕಾಳಪ್ಪ ಬಡಾವಣೆಗಳ ಸುಮಾರು 400 ಮನೆಗಳಿಗೆ ನೀರು ನುಗ್ಗಿದ್ದು, ಈ ಪ್ರದೇಶಗಳ ಜನರು ತಮ್ಮ ತಮ್ಮ ಮನೆಗಳಿಗೆ ಬೀಗ ಜಡಿದು, ನೆಂಟರಿಷ್ಟರ ಮನೆಗಳಿಗೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ನಕ್ಕುಂಡಿ ಹಾಗೂ ದೇವನಕುಂಡಿ ಕೆರೆಗಳತಗ್ಗು ಪ್ರದೇಶದಲ್ಲಿ ಬಡಾವಣೆಗಳು ಇರುವುದರಿಂದಲೇ ಇವು ಜಲಾವೃತವಾಗಿವೆ. ಕೆರೆಗಳಲ್ಲಿ ಸಾಕಷ್ಟು ಹೂಳು ತುಂಬಿದ್ದು, ಅದನ್ನು ಹೊರತೆಗೆಯದಿರುವುದೇ ಇದಕ್ಕೆ ಕಾರಣವಾಗಿದೆ.
ತುಮಕೂರಿನಲ್ಲಿ 144 ಮಿ.ಮೀ. ಮಳೆ : ಇತ್ತೀಚಿನ ವರ್ಷಗಳಲ್ಲಿ ತುಮಕೂರು ಇಂಥಾ ಮಳೆಯನ್ನೇ ಕಂಡಿರಲಿಲ್ಲ. ಭಾರೀ ಮಳೆಯ ಪರಿಣಾಮ 8 ಮನೆಗಳು ಕುಸಿದಿದ್ದು, 50ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ ಎಂದು ಉಪ ವಿಭಾಗಾಧಿಕಾರಿ ಪಿ.ಮಣಿವಣ್ಣನ್ ತಿಳಿಸಿದ್ದಾರೆ.
(ಇನ್ಫೋವಾರ್ತೆ)