ವೀರನ ಹೊಸಹಳ್ಳಿ ಅರಣ್ಯದಲ್ಲಿ ಆನೆ ಬಲರಾಮ ಪತ್ತೆಯಾಗಿದ್ದಾನೆ
ಮೈಸೂರು : ಮೂರ್ಕಲ್ನ ಆನೆ ಕ್ಯಾಂಪ್ನಿಂದ ನಾಪತ್ತೆಯಾಗಿದ್ದ , ಜಂಬೂಸವಾರಿಯ ಚಿನ್ನದಂಬಾರಿ ಹೊರುವ ಗಜರಾಜ ‘ ಬಲರಾಮನ’ ಜಾಡು ಕೊನೆಗೂ ಸಿಕ್ಕಿದೆ. ವೀರನ ಹೊಸ ಹಳ್ಳಿ ಅರಣ್ಯದಲ್ಲಿ ಶುಕ್ರವಾರ ರಾತ್ರಿ ಈ ಜಾಡು ಪತ್ತೆಯಾಗಿದೆ.
ಹುಣಸೂರು ವಲಯದ ಉಪ ಅರಣ್ಯಸಂರಕ್ಷಣಾಧಿಕಾರಿ ಅಣ್ಣಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಟಪ್ಪ ಅವರು ಪಶುವೈದ್ಯಾಧಿಕಾರಿ ಡಾ. ಬಿಟ್ಟಿಯಪ್ಪ, ವಲಯ ಅಧಿಕಾರಿ ಸುರೇಶ್ ಹೆಗಡೆ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಬಲರಾಮನಿಗಾಗಿ ನಡೆಸಿದ ಶೋಧದಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವೆಡೆ ಬಲರಾಮನ ಹೆಜ್ಜೆ ಗುರುತು ಮತ್ತು ಸರಪಳಿ ಎಳೆದುಕೊಂಡು ಹೋಗಿರುವ ಗುರುತುಗಳು ಕಂಡು ಬಂದಿದ್ದು, ಆ ಜಾಡಿನಲ್ಲಿ ಶೋಧ ಮುಂದುವರೆದಿತ್ತು. ಆಗಾಗ್ಗೆ ಮದವೇರಿ ಹೆಣ್ಣಾನೆಯನ್ನು ಹುಡುಕಿಕೊಂಡು ಹೋಗುತ್ತಿದ್ದ ಬಲರಾಮ ಒಂದೆರಡು ಕಿಲೋಮೀಟರ್ ಅಂತರದಲ್ಲಿ ಕಾಣಸಿಗುತ್ತಿದ್ದ.
ಆದರೆ ಈ ಬಾರಿ ಬಲರಾಮ, ಅಧಿಕಾರಿಗಳು ದಿನಗಟ್ಟಲೆ ಹುಡುಕುವಂತೆ ಮಾಡಿದ. ದ್ರೋಣ ಬದುಕಿದ್ದ ಸಮಯದಲ್ಲಿ ತನ್ನ ತುಂಟಾಟದಿಂದ ಮಾವುತನೊಬ್ಬನನ್ನು ಸಾಯಿಸಿದ್ದ ಬಲರಾಮ, ದ್ರೋಣನ ಸಾವಿನ ನಂತರ ದಸರಾ ಅಂಬಾರಿ ಹೊರಬಲ್ಲನೇ ಎಂಬ ಸಂಶಯ ಎಲ್ಲರನ್ನೂ ಕಾಡಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬಲರಾಮ ದಸರಾ ಅಂಬಾರಿ ಹೊರುತ್ತಿದ್ದಾನೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...