ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿ ಮಿನಿ ಸಂಪುಟ ಸಭೆ?
ಬೆಂಗಳೂರು : ಗುಡ್ಡಗಾಡು ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ದೃಷ್ಟಿಯಿಂದ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಿನಿ ಸಂಪುಟ ಸಭೆಯನ್ನು ನಡೆಸಲು ಕರ್ನಾಟಕ ಸರ್ಕಾರ ಯೋಜಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಅನೌಪಚಾರಿಕ ಹರಟೆಯಲ್ಲಿ ತೊಡಗಿದ್ದ ಅವರು ಈ ವಿಷಯ ತಿಳಿಸಿದರು. ಮಿನಿ ಸಂಪುಟ ಸಭೆ ನಡೆಯುವ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ . ಸಭೆ ನಡೆಯಲು ಅನುಕೂಲವಾಗುವ ಸ್ಥಳಗಳನ್ನು ಗೊತ್ತು ಪಡಿಸಲು ಶೀಘ್ರದಲ್ಲೇ ಎರಡೂ ಜಿಲ್ಲೆಗಳಿಗೆ ತಾವು ಭೇಟಿ ನೀಡುವುದಾಗಿ ಸಚಿವರು ಹೇಳಿದರು.
ನಾಗರಹೊಳೆ ಅರಣ್ಯ ಪ್ರದೇಶದ ಗುಡ್ಡಗಾಡು ಜನರ ಸಮಸ್ಯೆಗಳನ್ನು ಪರಿಹರಿಸಲು ಈ ಮುನ್ನ ಇಂಥಹ ಸಭೆಯನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ನಡೆಸಲಾಗಿತ್ತು . ಹೆಗ್ಗಡದೇವನಕೋಟೆ ಸಮೀಪದಲ್ಲಿ 1000 ಎಕರೆ ರೆವಿನ್ಯೂ ಭೂಮಿಯನ್ನು ಗುಡ್ಡಗಾಡು ಜನಾಂಗದವರಿಗೆ ವಿತರಿಸಲು ಸರ್ಕಾರ ಗುರ್ತಿಸಿದೆ ಎಂದು ತಿಮ್ಮಪ್ಪ ಹೇಳಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು, 16 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದು , ಮುಂದಿನ ಸಂಪುಟ ಸಭೆಯಲ್ಲಿ ಈ ಶಿಫಾರಸ್ಸು ಚರ್ಚೆಗೆ ಬರಲಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
(ಪಿಟಿಐ)