ಇವರು ಮಳೆಯಿಂದ ಮೋಸ ಹೋಗಿ ವಲಸೆ ಹೋದವರು
ಇಂಡಿ : ಕೊಡಗಿನಲ್ಲಿ ಮಳೆ ಆಕಾಶ ಭೂಮಿ ಒಂದು ಮಾಡುವಂತೆ ಸುರಿಯುತ್ತಿದ್ದರೆ ಇಂಡಿ ತಾಲ್ಲೂಕಿನಲ್ಲಿ ಚಿಕ್ಕೆ ಹನಿಯೂ ಬಿದ್ದಿಲ್ಲ. ಕುಡಿಯುವ ನೀರು ಹೊತ್ತು ತರುವ ಟ್ಯಾಂಕರ್ಗಳಿಗೆ ಕಾಯಲಾರದೆ ಅಲ್ಲಿನ ಮಂದಿ ಊರು ಬಿಟ್ಟು ಹೋಗಲಾರಂಭಿಸಿದ್ದಾರೆ.
ಇಲ್ಲಿನ ಝಳಕಿ, ಹಲಸಂಗಿ, ನಾದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದು, ಮಳೆಗಾಲ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಭೂಮಿಯ ಬಿರುಕು ಮುಚ್ಚಿಲ್ಲ. ಈ ಹಿಂದಿನ ವರ್ಷಗಳಲ್ಲಿ ಕೇವಲ 15 ಹಳ್ಳಿಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ 50 ಹಳ್ಳಿಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗುತ್ತದೆ ಎಂದು ತಹಶೀಲ್ದಾರ್ ಎಸ್. ಎಸ್. ಡಾಲೆ ಹೇಳುತ್ತಾರೆ.
ನೀರಿಗಾಗಿ ದನಕರುಗಳೂ ಮೈಲಿಗಟ್ಟಲೆ ಅಲೆಯುತ್ತಿವೆ. ಭೀಮಾ ದಂಡೆಯಲ್ಲಿರುವ ಪಡನೂರ, ಬರಗುಡಿ ಮತ್ತು ಖೇಡಗಿ ಪ್ರದೇಶಗಳಲ್ಲಿಯೂ ನೀರಿನ ಪಸೆ ಕಾಣುವುದಿಲ್ಲ. ಈ ಹಳ್ಳಿಗಳ ಮಂದಿಯೂ ಟ್ಯಾಂಕರ್ ನೀರಿಗಾಗಿ ಕಾಯುತ್ತಿದ್ದಾರೆ.
ಬಾರದ ಮಳೆಯ ಮೇಲಿನ ನಂಬಿಕೆ ಹೊರಟು ಹೋಗಿರುವುದರಿಂದ ಕಳೆದ ಒಂದು ವಾರದಿಂದ ತಾಲ್ಲೂಕಿನ ರೈತರು ಮಹಾರಾಷ್ಟ್ರದ ಪುಣೆ, ಸಾಂಗ್ಲಿ , ಸೊಲ್ಲಾಪುರ ಮತ್ತಿತರ ಪ್ರದೇಶಗಳಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋಗಲಾರಂಭಿಸಿದ್ದಾರೆ. ರೈತರು ಹೊಲ ಗದ್ದೆಗಳ ಬಿರುಕು ನೋಡಿಕೊಂಡು ಮಾಡಲು ಕೆಲಸ ವಿಲ್ಲದೆ ಬರಿಗೈಲಿ ಕುಳಿತಿರಲಾರದಾಗಿದ್ದಾರೆ. ಕುಡಿಯಲು ಲೋಟ ನೀರು ಸಿಗದ ಪ್ರದೇಶದಲ್ಲಿ ಬಿತ್ತನೆಗೆಲ್ಲಿ ಅವಕಾಶ ?