ರಾಜ್ಯದ 50 ಕಾಲೇಜುಗಳಲ್ಲಿ ಸಂಸ್ಕೃತ ಕಲಿಕಾ ಕೇಂದ್ರ- ಯುಜಿಸಿ
ಕಾರವಾರ : ವಿವಾದಿತ ಜ್ಯೋತಿಷ್ಯ ಶಾಸ್ತ್ರ ಕಲಿಕಾ ಕೇಂದ್ರಗಳನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ತೆರೆಯುವ ಪ್ರಸ್ತಾವನೆಯ ಬೆನ್ನಲ್ಲೇ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ ಇನ್ನೊಂದು ಹೆಜ್ಜೆ ಇಟ್ಟಿದೆ. ಈಗ ಸರತಿ ಸಂಸ್ಕೃತದ್ದು. ರಾಜ್ಯದ 50 ಪದವಿ ಕಾಲೇಜುಗಳಲ್ಲಿ ಸಂಸ್ಕೃತ ಸಂಭಾಷಣಾ ಕಲಿಕಾ ಕೇಂದ್ರಗಳನ್ನು ತೆರೆಯಲು ಯುಜಿಸಿ ನಿರ್ಧರಿಸಿದೆ.
ಈ ಬಗ್ಗೆ ಕಾಲೇಜುಗಳಿಗೆ ಅಧಿಸೂಚನೆಯೂ ತಲುಪಿದೆ. ನಗರದ ದಿವೇಕರ್ ವಾಣಿಜ್ಯ ಪದವಿ ಕಾಲೇಜಿಗೂ ಈ ಕುರಿತಂತೆ ಪತ್ರ ತಲುಪಿದೆ. ಸಂಸ್ಕೃತ ಭಾಷೆಯನ್ನು ಕಲಿಸುವ ಒಂದು ತಿಂಗಳ ಕೋರ್ಸ್ ಇದು. ಕೇಂದ್ರ ತೆರೆಯಲು ಒಂದು ಕಚೇರಿಗೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನೂ ಯುಜಿ-ಸಿ ಒದಗಿಸಲಿದೆ. ಗೌರವ ಉಪನ್ಯಾಸಕರಿಗೆ ತಿಂಗಳಿಗೆ 7 ಸಾವಿರ ರುಪಾಯಿ ಸಂಬಳ ನೀಡಲು ಸಿದ್ಧವಿದೆ. ಕೇಂದ್ರದ ಉಸ್ತುವಾರಿಗೆ ಒಂದು ಸಂಚಾಲಕ ಹುದ್ದೆಯನ್ನೂ ಸೃಷ್ಟಿಸಿದೆ.
ಬಾಲಂಗೋಚಿ : ಮುರಳಿ ಮನೋಹರ್ ಜೋಷಿ ಕೀ ಜೈ. ಭವಿಷ್ಯ ಹೇಳಿಕೊಡುವ ಇರಾದೆ ಆಯಿತು. ಈಗ ಸಂಸ್ಕೃತಕ್ಕೆ ಗತಿ ನೀಡಹೊರಟಿದ್ದಾರೆ. ಯುಜಿಸಿಯೂ ಬೆನ್ನು ಚಪ್ಪರಿಸುತ್ತಿದೆ. ಎಲ್ಲಾ ಹುನ್ನಾರಗಳೇ ಅಂತ ಕಾರವಾರಿಗರು ಗೊಣಗುತ್ತಿದ್ದಾರಂತೆ.
(ಇನ್ಫೋ ವಾರ್ತೆ)