ಉಡುಪಿಯಲ್ಲಿ ಕೃಷ್ಣ ! ನೀರಿನ ಸಮಸ್ಯೆನಿವಾರಣೆಗೆ ಬ್ಲಾಂಕ್ ಚೆಕ್
ಬೆಂಗಳೂರು : ಕುಡಿಯು ನೀರಿನ ಸಮಸ್ಯೆ ಬಗೆ ಹರಿಸುವಲ್ಲಿ ಅಧಿಕಾರಿಗಳು ಉದಾಸೀನ ತೋರಿಸಿದರೆ ಅವರನ್ನು ನಿಷ್ಠುರವಾಗಿ ದಂಡಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಉಡುಪಿ ಮತ್ತು ಕಾಪುಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆಗಳನ್ನು ನೆರವೇರಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತಾವು ಜಿಲ್ಲಾಧಿಕಾರಿಗಳಿಗೆ ಬ್ಲಾಂಕ್ ಚೆಕ್ ನೀಡುತ್ತಿರುವುದಾಗಿ ಪ್ರಕಟಿಸಿ, ಇದಕ್ಕೆ ಎಷ್ಟೇ ಹಣ ಖರ್ಚಾದರೂ, ಅದನ್ನು ಒದಗಿಸಲು ಸರಕಾರ ಸಿದ್ಧವಿದೆ ಎಂದರು.
ಕೆಂಪು ಪಟ್ಟಿಯನ್ನು ಕತ್ತರಿಸಿ ಚೂರು ಚೂರು ಮಾಡುವುದಾಗಿ ಭಾವಾವೇಶದಿಂದ ಮಾತನಾಡಿದ ಕೃಷ್ಣ , ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಣ ಬೇಕಿದ್ದಲ್ಲಿ, ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳ ಮೂಲಕ ತಮ್ಮನ್ನು ಸಂಪರ್ಕಿಸದೆ, ನೇರವಾಗಿ ತಮ್ಮ ಬಳಿಯೇ ಬಂದು ಮಾತನಾಡುವಂತೆ ಸ್ಥಳದಲ್ಲಿಯೇ ಆದೇಶಿಸಿದರು.
ಉಡುಪಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಮೀನುಗಾರರಿಗೆ ಸ್ವಯಂ ಅಪಘಾತ ವಿಮಾಯೋಜನೆಯನ್ನು ಜಾರಿಗೊಳಿಸಿದರು. ನ್ಯೂ ಇಂಡಿಯಾ ಎಶ್ಯೂರೆನ್ಸ್ ಕಂಪೆನಿಯ ವಿಭಾಗೀಯ ಅಧಿಕಾರಿ ನೀರಜಾ ಕಪೂರ್ ಅವರು 1200 ಮೀನುಗಾರರಿಗೆ 9 ಕೋಟಿ ರೂ. ವಿಮೆ ಸೌಲಭ್ಯದ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿಗಳ ಮೂಲಕ ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ, ಉಡುಪಿ ಶಾಸಕ ಯು. ಆರ್. ಸಭಾಪತಿಗೆ ಹಸ್ತಾಂತರಿಸಿದರು.
ಕಾಪುವಿಗೆ ತೆರಳಿದ ಮುಖ್ಯಮಂತ್ರಿಗಳು ಅಲ್ಲಿ, ರಾಜೀವ ಗಾಂಧಿ ಭವನ, ಕಾಪು ಪೇಟೆಯ ಡಬ್ಬಲ್ ರೋಡ್ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ಟೆಂಡರ್ ಕರೆಯದೇ ಕಾಮಗಾರಿಯನ್ನು ವಹಿಸಿಕೊಟ್ಟರೆ ಅಂತಹ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ವಿನಯ ಕುಮಾರ್ ಸೊರಕೆ, ಜನಾರ್ದನ ಪೂಜಾರಿ, ಶಾಸಕ ಗೋಪಾಲ ಪೂಜಾರಿ , ಗೋಪಾಲ ಭಂಡಾರಿ, ಸಚಿವ ಡಾ. ಎಂ. ಬಿ. ಮಲಕ ರೆಡ್ಡಿ , ಮರ್ಗರೇಟ್ ಆಳ್ವ, ಸಚಿವೆ ಮೋಟಮ್ಮ ಮತ್ತಿತರರು ಭಾಗವಹಿಸಿದ್ದರು.
(ಮಂಗಳೂರು ಪ್ರತಿನಿಧಿಯಿಂದ)